ಬೆಳಗಾವಿ: ಶಾಸಕರಿಗೆ ಗೋವಾದಲ್ಲಿ ರೆಸಾರ್ಟ್ ಬುಕ್ ಮಾಡಲಾಗಿದೆ ಎಂಬ ವಿಚಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯ ಬೈಲಹೊಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೂ ಬುಕ್ ಆಗಿಲ್ಲ. ಹಾಲಿಡೇಗೆ ನಮ್ಮ ಶಾಸಕರು ಟೂರ್ ಹೋಗಬಾರದಾ? ಎಲ್ಲರೂ ಸೇರಿಯೂ ಹೋಗಬಹುದು, ಬಿಟ್ಟೂ ಹೋಗಬಹುದು. ಅದೇನು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಮತ್ತೆ ಶಾಸಕರು ಫಾರಿನ್ ಟೂರ್ಗೆ ಸಿದ್ಧರಾಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಯಾರು ಹೋಗುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ವೈಯಕ್ತಿಕ ಟೂರ್ಗೆ ಹೊರಟರೆ ನಾವೇನು ಹೋಗಬೇಡಿ ಅಂತ ಹೇಳುವುದಕ್ಕೆ ಆಗುತ್ತಾ?” ಎಂದು ಮರುಪ್ರಶ್ನಿಸಿದರು.
ಸಿಎಂ ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ಏಕೆ ಫುಲ್ ಸ್ಟಾಪ್ ಇಡುತ್ತಿಲ್ಲ ಎಂಬ ಪ್ರಶ್ನೆಗೆ, ಯಾರು ಫುಲ್ ಸ್ಟಾಪ್ ಇಟ್ಟಿದ್ದಾರೆ, ಯಾರೂ ಇಟ್ಟಿಲ್ಲ ಎಂದು ಉತ್ತರಿಸಿದರು. ಇದೇ ವೇಳೆ, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ನಿರಂತರ ಸಿಎಂ ಬದಲಾವಣೆ ಕೂಗಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಗೊಂದಲ ಮೂಡುತ್ತಿದೆಯೇ ಎಂಬ ಪ್ರಶ್ನೆಗೆ, ನಮ್ಮಲ್ಲಿ ಯಾವುದೇ ಗೊಂದಲವೂ ಇಲ್ಲ. ಮೊನ್ನೆ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೆವು. ಹಾವೇರಿಯಲ್ಲಿ ಸಾವಿರ ದಿನದ ಕಾರ್ಯಕ್ರಮವನ್ನೂ ಒಟ್ಟಾಗಿ ಮಾಡಿದ್ದೇವೆ. ಸರ್ಕಾರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ, ಭಿನ್ನಮತವೂ ಇಲ್ಲ. ಈ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವೂ ಇಲ್ಲ ಎಂದು ಸಮರ್ಥಿಸಿಕೊಂಡರು.



