ಬೆಂಗಳೂರು: ಶಾಸಕರಿಗೆ ವಿದೇಶ ಪ್ರವಾಸ ಭಾಗ್ಯ ದಯಪಾಲಿಸಿದ ಮುಖ್ಯಮಂತ್ರಿಯವರು ಆರೋಗ್ಯ ಸಚಿವರನ್ನೂ ಆಸ್ಟ್ರೇಲಿಯ, ನ್ಯೂಜಿಲೆಂಡ್ಗೆ ಕಳಿಸಿದರೆ ಬಡವರ ಪರಿಸ್ಥಿತಿ ಏನಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸರಕಾರಿ ಆಸ್ಪತ್ರೆಗಳಲ್ಲಿ ಇದೀಗ ಔಷಧಿ ಸಿಗದೇ ಬಡಜನರು ಪರದಾಡುತ್ತಿದ್ದಾರೆ. ಎಷ್ಟೋಕಡೆ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿದ ಮಾಹಿತಿ ಬರುತ್ತಿದೆ ಎಂದು ಆರೋಪಿಸಿದರು.
ಆರೋಗ್ಯ ಇಲಾಖೆ ಸಚಿವರು, ಮುಖ್ಯಮಂತ್ರಿಗಳು ಇದರ ಕುರಿತು ಗಮನ ಹರಿಸಿಲ್ಲ ಎಂದು ಟೀಕಿಸಿದರು. ಸಚಿವರು, ಶಾಸಕರನ್ನು ಹೊರಕ್ಕೆ ಕಳಿಸುವ ಮುಂಚಿತವಾಗಿ ಔಷಧಿ ಸಮರ್ಪಕ ಸರಬರಾಜಿಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರ ಜನಪ್ರಿಯತೆಯನ್ನು ಸಹಿಸಲು ಸಾಧ್ಯವಾಗದೇ ಜನೌಷಧಿ ಕೇಂದ್ರಗಳಿಗೂ ಕಲ್ಲು ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು. ಗ್ರಾಮೀಣ ಭಾಗದಲ್ಲಿ ಕೃತಕವಾಗಿ ಔಷಧಿ ಕೊರತೆಯನ್ನು ಸೃಷ್ಟಿಸಿ,
ಟೆಂಡರ್ ಕರೆಯದೇ ತುರ್ತು ಖರೀದಿ ಎಂದು ಕಳ್ಳ ದಂಧೆ ಮಾಡಲು ಸರಕಾರ ಹೊರಟಿದೆಯೇ ಎಂಬ ವಿಚಾರ ರಾಜ್ಯದ ಜನರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದರು. ರಾಜ್ಯ ಸರಕಾರ, ಸಚಿವರು ಎಚ್ಚತ್ತುಕೊಂಡು ಇದರ ಕುರಿತು ಗಮನ ಹರಿಸಬೇಕು. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.



