ವಿಜಯಸಾಕ್ಷಿ ಸುದ್ದಿ, ಧಾರವಾಡ: ಶ್ರೀಧರ ಗಸ್ತಿ ಓರ್ವ ಶಿಕ್ಷಕರಾಗಿ ಮಕ್ಕಳ ಮನಸ್ಸನ್ನು ಅರಳಿಸಿ, ಅವರ ಕಲ್ಪನಾ ಶಕ್ತಿಯನ್ನು ವೃದ್ಧಿಸುವ ಕಾರ್ಯವನ್ನು ಮಕ್ಕಳ ಸಾಹಿತ್ಯದ ಮೂಲಕ ಮಾಡಿದ್ದು ಅಭಿನಂದನೀಯ ಎಂದು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.
ಅವರು ಕ.ವಿ.ವ ಸಂಘದಲ್ಲಿ ಧಾರವಾಡದ ಚಿಲಿಪಿಲಿ ಪ್ರಕಾಶನದ ವತಿಯಿಂದ ಸಾಹಿತಿ ಶ್ರೀಧರ ಗಸ್ತಿ ಅವರ ‘ದಿ ಕಪ್ಟಿಚ್ಡ್ ಬೈ ದೇವಮ್ಮ’ ಹಾಗೂ ‘ಎಳೆಬಾಳೆ ಸುಳಿ ನಾನವ್ವ’ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಧರ ಗಸ್ತಿ ಓರ್ವ ಸೃಜನಶೀಲ ಬರಹಗಾರರು ಮಾತ್ರವಲ್ಲ, ಕಥೆಗಾರರು, ಅನುವಾದಕಾರರು ಹೌದು. ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ತಮ್ಮ ಶಾಲಾ ಜೀವನದ ವಾಸ್ತವಿಕ ಅನುಭವಗಳ ಸಾರವಾಗಿವೆ. ಅವರ ಸಾಹಿತ್ಯದಲ್ಲಿ ಬದುಕಿನ ಸತ್ಯಗಳಿವೆ. ಪ್ರಾಚೀನತೆಗಿಂತ ಆಧುನಿಕತೆಯ ವಾಸ್ತವಿಕ ಕಥೆಗಳಿವೆ. ಅವರು ರಚಿಸಿದ ಮಕ್ಕಳ ಕಥೆಗಳು ಕೇವಲ ಮಕ್ಕಳು ಮಾತ್ರವಲ್ಲ, ವಯಸ್ಕರರೂ ಓದುವಂತವುಗಳು. ವಾಯ್.ಜಿ. ಭಗವತಿಯವರ ‘ದೇವಮ್ಮನ ಲೋಟ’ ಕನ್ನಡ ಕೃತಿಯನ್ನು ಶ್ರೀಧರ ಗಸ್ತಿ ಆಂಗ್ಲ ಭಾಷೆಗೆ ಅನುವಾದಿಸಿ, ಅನ್ಯಭಾಷಿಕರಿಗೂ ಕನ್ನಡ ಭಾಷಾ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸಿದ್ದಾರೆ. ಅನುವಾದ ಕಾರ್ಯ ಬಹಳ ಕ್ಲಿಷ್ಟಕರವಾದುದು. ದೇವಮ್ಮನ ಲೋಟದಲ್ಲಿ ಜಾತಿಯ ತಾರತಮ್ಯ, ಸಾಮಾಜಿಕ ಅನಿಷ್ಟಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಲಾಗಿದೆ ಎಂದು ಹೇಳಿದರು.
ರಂಗಕರ್ಮಿ ಝಕೀರ ನದಾಫ್ `ಎಳೆಬಾಳೆ ಸುಳಿನಾನವ್ವ’ ಕೃತಿಯ ಕುರಿತು ಮಾತನಾಡಿ, ಮಕ್ಕಳ ನಾಟಕ ಬರೆಯುವುದು ಪ್ರಯಾಸದಾಯಕ. ಮಕ್ಕಳ ಮನಸ್ಥಿತಿ, ಭಾವನೆ ಅರಿತು ನಾಟಕ ರಚಿಸಬೇಕಾಗುತ್ತದೆ. ಸಾಮಾಜಿಕ ಅನಿಷ್ಟಗಳ ಕುರಿತು ನಾಟಕ ರಚಿಸಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದು ಅಭಿನಂದನೀಯ ಎಂದು ಹೇಳಿದರು.
ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ ಮಾತನಾಡಿ, ಚಿಲಿಪಿಲಿ ಸಂಸ್ಥೆ ಉದಯೋನ್ಮುಖ ಸಾಹಿತಿಗಳಿಗೊಂದು ವರದಾನ. ಅನೇಕ ಯುವ ಸಾಹಿತಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ. ಗಸ್ತಿಯವರ ಎರಡೂ ಕೃತಿಗಳು ಉತ್ಕೃಷ್ಟವಾಗಿವೆ ಎಂದು ಹೇಳಿದರು.
ಮಕ್ಕಳ ಸಾಹಿತಿಗಳಾದ ವಾಯ್.ಜಿ. ಭಗವತಿ ಹಾಗೂ ಶ್ರೀಧರ ಗಸ್ತಿ ಮಕ್ಕಳ ಸಾಹಿತ್ಯದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ.ಹೊರಕೇರಿ, ಡಾ. ಜಿನದತ್ತ ಹಡಗಲಿ, ಬಾಬಾಜಾನ ಮುಲ್ಲಾ, ಜಕಾತಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಎನ್.ಜಿ. ಗುರುಪುತ್ರನವರ, ಬಿ.ಬಿ. ಪಾಟೀಲ, ಮೀನಾಕಮಾರಿ ಆಚಾರ್ಯ, ಸುಧಾ ಕಬ್ಬೂರ, ತನುಜಾ ಮುಗದ, ಮಾಧುರಿ ಕುಲಕರ್ಣಿ, ಭಾರತಿ ಬಡಿಗೇರ, ಪ್ರಮೀಳಾ ಜಕ್ಕಣ್ಣನವರ ಮುಂತಾದವರಿದ್ದರು.
ನಿ. ಶ್ರೀಶೈಲ ಸ್ವಾಗತಿಸಿದರು. ಎನ್.ಬಿ. ದ್ಯಾಪೂರ ನಿರ್ವಹಿಸಿದರು. ಅಶೋಕ ಡೊಂಬರಕೊಪ್ಪ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಶ್ರೀಧರ ಗಸ್ತಿ ಹಾಗೂ ವಾಯ್.ಜಿ. ಭಗವತಿ ಇಬ್ಬರೂ ಶಿಕ್ಷಕ ವೃತ್ತಿಯ ಜೊತೆಗೆ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವುದು ಅಭಿಮಾನದ ಸಂಗತಿ. ಸಾಹಿತಿಗಳಿಗೆ, ಬರಹಗಾರರಿಗೆ ಮೊದಲು ಸಾಹಿತ್ಯದ ಹಸಿವು ಮುಖ್ಯ. ಆಧುನಿಕತೆಯಲ್ಲೂ ಸುಶಿಕ್ಷಿತರೇ ಹೆಚ್ಚು ಮೌಢ್ಯಕ್ಕೆ ಒಳಗಾಗುತ್ತಿರುವುದು ಒಂದು ದುರಂತ. ಮಕ್ಕಳ ಸಾಹಿತಿಗಳು ಕಲಾಂ ಅವರಂತೆ ಮಕ್ಕಳ ಭಾವನೆಗೆ ಬಣ್ಣ ತುಂಬುವ ಕಾರ್ಯ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.



