ವಿಜಯಪುರ: ಸಾಲದ ವಿಚಾರಕ್ಕೆ ದಂಪತಿ ಮಧ್ಯೆ ನಡೆದ ಜಗಳ ತಾರಕಕ್ಕೇರಿ ಪತಿಯೋರ್ವನು ಪತ್ನಿಯನ್ನು ರಾಡ್ನಿಂದ ಹೊಡೆದು ಹತ್ಯೆ ಮಾಡಿ, ಮನೆಯಲ್ಲೇ ಶವವನ್ನು ಹೂತುಹಾಕಿದ್ದ ಭಯಾನಕ ಘಟನೆ 24 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಘಟನೆ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿರುವುದು ತಿಳಿದುಬಂದಿದೆ.
ಹಂತಕ ಪತಿಯನ್ನು ಪ್ರಭು ರತ್ನಾಕರ್ (46) ಹಾಗೂ ಮೃತ ಪತ್ನಿಯನ್ನು ಸರೋಜಿನಿ ರತ್ನಾಕರ್ (45) ಎಂದು ಗುರುತಿಸಲಾಗಿದೆ. ಈ ಸಂಬಂಧ ಸರೋಜಿನಿಯ ತಾಯಿ ಕಮಲವ್ವ ಅವರು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ರತ್ನಾಕರ್ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿದ್ದ. ಸಾಲದ ವಿಚಾರವಾಗಿ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜ.23ರಂದು ರಾತ್ರಿ ಮತ್ತೊಮ್ಮೆ ಜಗಳ ತಾರಕಕ್ಕೇರಿದ್ದು, ಜ.24ರಂದು ಸರೋಜಿನಿಯ ತಲೆಗೆ ಪತಿ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಹತ್ಯೆಯ ಬಳಿಕ ಶವವನ್ನು ಮನೆಯಲ್ಲೇ ಹೂತುಹಾಕಿದ್ದಾನೆ ಎನ್ನಲಾಗಿದೆ. 24 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.



