ಹಾವೇರಿ: ಒಬ್ಬ ಶಿಕ್ಷಕರು ನಿವೃತ್ತಿಯಾಗುವ ಮುನ್ನವೇ ಹೊಸ ಶಿಕ್ಷಕರ ನೇಮಕ ಮಾಡುವ ತಮಿಳುನಾಡು ಮಾದರಿಯ ವ್ಯವಸ್ಥೆ ರಾಜ್ಯದಲ್ಲೂ ಜಾರಿಯಾದರೆ ಖಾಲಿ ಹುದ್ದೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆ ಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ, ಸರಸ್ವತಿ ಪೂಜೆ, 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
“ತಾಯಿ ಮೊದಲ ಗುರು, ನಂತರ ಶಾಲೆಯ ಗುರು ಶಿಕ್ಷಣ ನೀಡುತ್ತಾರೆ. ಸಮಾಜ ಬದುಕಿನ ಪಾಠ ಕಲಿಸುತ್ತದೆ. ವಿದ್ಯಾರ್ಥಿ ಜೀವನವು ಶಾಲೆಯಲ್ಲಿ ಪಾಠ–ಪರೀಕ್ಷೆಯಾಗಿದ್ದರೆ, ಜೀವನದಲ್ಲಿ ಮೊದಲೇ ಪರೀಕ್ಷೆ ನಂತರ ಪಾಠ. ಹೀಗಾಗಿ ಪಾಠ–ಪರೀಕ್ಷೆ ನಿರಂತರ ಪ್ರಕ್ರಿಯೆ,” ಎಂದು ಅವರು ಹೇಳಿದರು.
ಗ್ರಾಮೀಣ ಮತ್ತು ನಗರ ಮಕ್ಕಳ ಶಿಕ್ಷಣದ ನಡುವಿನ ಅಂತರವನ್ನು ಉಲ್ಲೇಖಿಸಿದ ಅವರು, 5ನೇ ತರಗತಿವರೆಗೆ ಕನ್ನಡ ಮತ್ತು ನಂತರ ಇಂಗ್ಲಿಷ್ ಕಲಿಯುವ ವ್ಯವಸ್ಥೆಯಿಂದ ಗ್ರಾಮೀಣ ಮಕ್ಕಳು ಸ್ಪರ್ಧೆಯಲ್ಲಿ ಹಿಂದುಳಿಯುವ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. “ಈ ಪ್ರಶ್ನೆಗೆ ಸಚಿವರು ಉತ್ತರ ಕೊಡಬೇಕು,” ಎಂದು ಅವರು ಸವಾಲು ಹಾಕಿದರು.
ರಾಜ್ಯದಲ್ಲಿ 65% ಶಾಲೆಗಳು ಹಳೆ ಮೈಸೂರು ಭಾಗದಲ್ಲಿದ್ದು, 35% ಮಾತ್ರ ಉತ್ತರ ಕರ್ನಾಟಕದಲ್ಲಿವೆ ಎಂದ ಅವರು, ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಿ, ಶಿಕ್ಷಕರ ನೇಮಕಾತಿಯನ್ನು ವೇಗಗೊಳಿಸಬೇಕು ಎಂದು ಒತ್ತಾಯಿಸಿದರು.
“ನಾನು ಮುಖ್ಯಮಂತ್ರಿಯಾಗಿದ್ದಾಗ 30 ಸಾವಿರ ಶಾಲಾ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಿದ್ದೆವು. ಮೊದಲ ವರ್ಷವೇ 9 ಸಾವಿರ ಕಟ್ಟಡಗಳು ನಿರ್ಮಾಣಗೊಂಡವು. 15 ಸಾವಿರ ಶಿಕ್ಷಕರ ನೇಮಕಕ್ಕೂ ಆದೇಶ ನೀಡಿದ್ದೆವು. ಅದು ಮುಂದುವರೆಯಬೇಕು,” ಎಂದು ಬೊಮ್ಮಾಯಿ ಹೇಳಿದರು.
ತಮಿಳುನಾಡಿನಲ್ಲಿ ನಿವೃತ್ತಿಗೆ ಒಂದು ವರ್ಷ ಮುಂಚೆಯೇ ಶಿಕ್ಷಕರ ನೇಮಕ ಮಾಡಿ ತರಬೇತಿ ನೀಡುವ ವ್ಯವಸ್ಥೆಯನ್ನು ಉದಾಹರಿಸಿ, “ಆ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕು,” ಎಂದು ಆಗ್ರಹಿಸಿದರು.



