ಟಿ20 ವಿಶ್ವಕಪ್ ಲೀಗ್ ಹಂತದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದಿದ್ದ ಟೀಮ್ ಇಂಡಿಯಾ, ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್ಗಳಲ್ಲಿ 111 ರನ್ಗಳಿಗೆ ಆಲೌಟ್ ಆಯಿತು. ಪರಿಣಾಮ ಭಾರತ 76 ರನ್ಗಳಿಂದ ಸೋಲೊಪ್ಪಿಕೊಂಡಿತು.
ಸೋಲಿನ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, “ಪಂದ್ಯದ ಆರಂಭದಲ್ಲಿ ನಾವು ಉತ್ತಮ ಬೌಲಿಂಗ್ ಮಾಡಿದ್ದೇವೆ. ಕೇವಲ 21 ರನ್ಗಳಿಗೆ 3 ವಿಕೆಟ್ ಕಬಳಿಸಿ ಆರಂಭಿಕ ಆಘಾತ ನೀಡಿದ್ದೆವು. ಆದರೆ 7ರಿಂದ 15ನೇ ಓವರ್ವರೆಗೆ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಉತ್ತಮವಾಗಿ ಆಡಿದರು. ಕೊನೆಯ ಹಂತದಲ್ಲಿ ಮತ್ತೆ ನಮ್ಮ ಬೌಲರ್ಗಳು ಚೇತರಿಸಿಕೊಂಡರು. ಒಟ್ಟಾರೆ ಬೌಲಿಂಗ್ ಚೆನ್ನಾಗಿತ್ತು, ಆದರೆ ಬ್ಯಾಟಿಂಗ್ನಲ್ಲಿ ನಾವು ಇನ್ನಷ್ಟು ಉತ್ತಮ ಪ್ರದರ್ಶನ ನೀಡಬಹುದಿತ್ತು” ಎಂದರು.
“180-185 ರನ್ ಗುರಿಯನ್ನು ಬೆನ್ನಟ್ಟುವಾಗ ಪವರ್ಪ್ಲೇನಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ, ಆದರೆ ಕಳೆದುಕೊಳ್ಳಬಹುದು. ನಾವು ಪವರ್ಪ್ಲೇನಲ್ಲಿ ಹಲವು ವಿಕೆಟ್ ಕಳೆದುಕೊಂಡಿದ್ದು ದೊಡ್ಡ ಹೊಡೆತವಾಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ದೊಡ್ಡ ಮೊತ್ತದ ಗುರಿ ಬೆನ್ನಟ್ಟುವುದು ಕಷ್ಟ. ಇದರಿಂದ ಪಾಠ ಕಲಿತಿದ್ದೇವೆ,” ಎಂದು ಹೇಳಿದರು.
ಈ ಸೋಲಿನ ನಡುವೆಯೂ ಸಕಾರಾತ್ಮಕ ಅಂಶವಾಗಿಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಪ್ರದರ್ಶನವನ್ನು ಅವರು ಪ್ರಶಂಸಿಸಿದರು. ಇಬ್ಬರೂ ಸೇರಿ ಎಸೆದ 8 ಓವರ್ಗಳಲ್ಲಿ 5 ವಿಕೆಟ್ ಕಬಳಿಸಿ ಕೇವಲ 45 ರಿಂದ 50 ರನ್ ಮಾತ್ರ ನೀಡಿದರು.
“ಇಬ್ಬರು ಅನುಭವಿ ವೇಗಿಗಳು ತಂಡದಲ್ಲಿರುವುದು ನಮ್ಮ ಪ್ಲಸ್ ಪಾಯಿಂಟ್. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತು. ಮುಂದಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಉತ್ತಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶಿಸಿ ಕಂಬ್ಯಾಕ್ ಮಾಡುತ್ತೇವೆ. ಟೀಮ್ ಇಂಡಿಯಾ ತನ್ನ ಬ್ರಾಂಡ್ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತದೆ,” ಎಂದು ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.



