ಚಿಕ್ಕಮಗಳೂರು: ಕಾಫಿನಾಡಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರಕ್ಕೆ ತೀರಾ ಸಮೀಪದಲ್ಲಿರುವ ಮತ್ತಾವರ ಹಾಗೂ ನಲ್ಲೂರು ಗ್ರಾಮಗಳ ಸುತ್ತ ಎರಡು ಪುಂಡಾನೆಗಳು ಬೀಡುಬಿಟ್ಟಿದ್ದು, ಎಸ್ಟೇಟ್ಗಳ ನಡುವೆ ನಿರಂತರ ಸಂಚಾರ ನಡೆಸುತ್ತಿವೆ.
ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಆತಂಕಗೊಂಡಿದ್ದು, ಭತ್ತದ ಪೈರುಗಳು ಹಾನಿಗೊಳಗಾಗಿವೆ. ಇದೇ ವೇಳೆ ಚಿಕ್ಕಮಗಳೂರು–ಬೇಲೂರು ಗಡಿಭಾಗದ ಚೀಕನಹಳ್ಳಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದ ಯಕ್ಕಡಬೈಲು ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡೂ ತಂಗಿರುವುದು ಪತ್ತೆಯಾಗಿದೆ.
ಒಂಟಿ ಸಲಗಗಳಷ್ಟೇ ಅಲ್ಲದೆ, ಗುಂಪು ಗುಂಪಾಗಿ ಸಂಚರಿಸುತ್ತಿರುವ ಆನೆಗಳು ಕೃಷಿಕರ ನೆಮ್ಮದಿಯನ್ನು ಕಸಿದುಕೊಂಡಿವೆ. ಬೆಳೆ ಹಾನಿಯ ಜೊತೆಗೆ ಜೀವಭಯವೂ ಕಾಡುತ್ತಿದೆ.
ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಸೂಚನೆ ನೀಡಿದ್ದು, ಮುಂಜಾನೆ ತೋಟಗಳಿಗೆ ತೆರಳುವವರು, ವಾಕಿಂಗ್ಗೆ ಹೋಗುವವರು ಮತ್ತು ರಾತ್ರಿ ವಾಹನ ಚಲಾಯಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ. ಕಾಡಾನೆಗಳನ್ನು ಕೆಣಕದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.



