ಮಡಿಕೇರಿ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಮದುವೆಗೆ ಕ್ಷಣಗಣನೆ ಆರಂಭಗೊಂಡಿದ್ದು, ವಿರಾಜಪೇಟೆ ಸಮೀಪದಲ್ಲಿರುವ ರಶ್ಮಿಕಾ ಅವರ ಮೂಲ ಮನೆ ಸಂಭ್ರಮದ ವಾತಾವರಣದಲ್ಲಿ ಶೃಂಗಾರಗೊಂಡಿದೆ.
ರಶ್ಮಿಕಾ ಮಂದಣ್ಣ ಅವರು ವಿರಾಜಪೇಟೆ ಸಮೀಪದ ಕದನೂರು ಗ್ರಾಮದವರಾಗಿದ್ದು, ಅವರ ಪೋಷಕರು ಇಂದಿಗೂ ಅಲ್ಲಿಯೇ ವಾಸವಿದ್ದಾರೆ. ಮದುವೆ ಹಿನ್ನೆಲೆ ಮನೆಯ ಮುಂದೆ ಚಪ್ಪರ ಹಾಕಲಾಗಿದ್ದು, ಮನೆಯ ಬಾಗಿಲು ಹಾಗೂ ಮುಂಭಾಗವನ್ನು ಹೂವಿನಿಂದ ಅಲಂಕರಿಸಲಾಗಿದೆ.
ಹತ್ತು ದಿನಗಳ ಹಿಂದೆಯೇ ರಶ್ಮಿಕಾ ಅವರ ಪೋಷಕರು ಹಾಗೂ ಬಂಧುಮಿತ್ರರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದಾರೆ. ಪ್ರಸ್ತುತ ಮನೆಯಲ್ಲಿ ಯಾರೂ ಇಲ್ಲದಿದ್ದರೂ, ಮನೆ ನೋಡಿಕೊಳ್ಳುತ್ತಿರುವ ಸರೋಜಮ್ಮ ಅವರು ಸಂಪ್ರದಾಯದಂತೆ ಚಪ್ಪರ ಶಾಸ್ತ್ರವನ್ನು ನೆರವೇರಿಸಿದ್ದಾರೆ.
ಸರೋಜಮ್ಮ ಅವರು ಮಾತನಾಡುತ್ತಾ, ತಾವು ಎತ್ತಿ ಬೆಳೆಸಿದ ಮಗಳು ಇನ್ನೊಬ್ಬರ ಮನೆಗೆ ದೀಪವಾಗಲು ಹೊರಡುತ್ತಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದು ತಿಳಿಸಿದರು. ಮಗಳ ಮದುವೆ ನಡೆಯುತ್ತಿರುವುದು ಅಪಾರ ಖುಷಿ ತಂದಿದೆ ಎಂದರು. ಇತ್ತೀಚೆಗೆ ರಶ್ಮಿಕಾ ಊರಿಗೆ ಬಂದ ಸಂದರ್ಭದಲ್ಲಿ ಮೈಸೂರಿನವರೆಗೆ ಹೋಗಿ ಬಿಟ್ಟು ಬಂದಿದ್ದಾಗಿ ಹೇಳಿದರು.
ಇನ್ನೂ ಕೊಡಗಿನ ಜನರು ಹಾಗೂ ಬಂಧುಮಿತ್ರರಿಗಾಗಿ ಏಪ್ರಿಲ್ ತಿಂಗಳಲ್ಲಿ ವಿಶೇಷ ಔತಣಕೂಟ ಆಯೋಜಿಸುವ ಸಿದ್ಧತೆ ನಡೆದಿದೆ. ಮಗಳು ಹಾಗೂ ಅಳಿಯನನ್ನು ನೋಡಲು ತಾವು ಕೂಡ ಕಾತುರದಿಂದ ಕಾಯುತ್ತಿದ್ದೇನೆ ಎಂದು ಸರೋಜಮ್ಮ ತಿಳಿಸಿದ್ದಾರೆ.



