ಬೆಂಗಳೂರು: ಬೆಂಗಳೂರಿನಿಂದ ನೇಪಾಳದ ಕಠ್ಮಂಡುಗೆ ತೆರಳುತ್ತಿದ್ದ ಕನ್ನಡಿಗರು ಭಾರೀ ಸಂಕಷ್ಟ ಅನುಭವಿಸಿದ ಘಟನೆ ನಡೆದಿದೆ. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಕಠ್ಮಂಡುವಿನಲ್ಲಿ ವಿಮಾನ ಇಳಿಯಲು ಅನುಮತಿ ಸಿಗದೆ, ಪ್ರಯಾಣಿಕರು ಎರಡು ದಿನಗಳ ಕಾಲ ವಿಮಾನದಲ್ಲೇ ಉಳಿಯುವಂತಾಯಿತು.
ಫೆಬ್ರವರಿ 26ರಂದು ಬೆಳಗ್ಗೆ ಬೆಂಗಳೂರಿನಿಂದ ಕಠ್ಮಂಡುಗೆ ಪ್ರಯಾಣ ಆರಂಭಿಸಿದ್ದ ವಿಮಾನವು, ಲ್ಯಾಂಡಿಂಗ್ ಅನುಮತಿ ಸಿಗದ ಕಾರಣ ದಿನಪೂರ್ತಿ ಆಕಾಶದಲ್ಲೇ ಸುತ್ತಾಡಿತು. ಬಳಿಕ ರಾತ್ರಿ ಮತ್ತೆ ಬೆಂಗಳೂರಿಗೆ ಮರಳಿತು. ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು.
ಪ್ರಯಾಣಿಕರ ಆರೋಪದಂತೆ, ವಿಮಾನದಲ್ಲಿದ್ದ ಅವಧಿಯಲ್ಲಿ ಸರಿಯಾದ ಆಹಾರ ಹಾಗೂ ಕುಡಿಯುವ ನೀರು ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ಮಕ್ಕಳು, ವೃದ್ಧರು ಸೇರಿ ಹಲವರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ನಂತರ ಫೆಬ್ರವರಿ 27ರ ಬೆಳಗ್ಗೆ ಮತ್ತೆ ಅದೇ ವಿಮಾನದಲ್ಲಿ ಸುಮಾರು 170 ಪ್ರಯಾಣಿಕರನ್ನು ಕಠ್ಮಂಡುಗೆ ಕರೆದೊಯ್ಯಲಾಗಿದೆ. ಈ ಅವಾಂತರದಿಂದಾಗಿ ಪ್ರಯಾಣಿಕರಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಮಾನ ಸಂಸ್ಥೆ ಹಾಗೂ ಅಧಿಕಾರಿಗಳಿಂದ ಸ್ಪಷ್ಟನೆ ನಿರೀಕ್ಷಿಸಲಾಗಿದೆ.



