ಬೆಂಗಳೂರು: ರಾಜಧಾನಿಯಲ್ಲಿ ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ ಒಂಟಿ ಮಹಿಳೆಯೊಬ್ಬರನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡು ಮಾಡಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಪೈಪ್ಲೈನ್ ರಸ್ತೆಯಲ್ಲಿ ಏಪ್ರಿಲ್ 21ರಂದು ನಡೆದಿದ್ದ ಘಟನೆ ಆರಂಭದಲ್ಲಿ ಸಾಮಾನ್ಯ ರಸ್ತೆ ಅಪಘಾತ ಎಂದು ಕಾಣಿಸಿಕೊಂಡಿತ್ತು. ಆದರೆ ಪೊಲೀಸರ ತೀವ್ರ ತನಿಖೆಯಲ್ಲಿ ಇದು ಪೂರ್ವಯೋಜಿತ ಕೊಲೆ ಮತ್ತು ಸುಲಿಗೆ ಯತ್ನ ಎಂಬುದು ಬಹಿರಂಗವಾಗಿದೆ.
ವಿಜಯಲಕ್ಷ್ಮಿ ಎಂಬ ಮಹಿಳೆಯ ಪರಿಚಯ ಹೊಂದಿದ್ದ ಆರೋಪಿ ಚೇತನ್, ಆಕೆಯ ಬಳಿ ಹಣ ಮತ್ತು ಚಿನ್ನಾಭರಣ ಇರುವ ಮಾಹಿತಿ ಆಧರಿಸಿ ಸ್ನೇಹಿತರ ಜೊತೆ ಸೇರಿ ಸಂಚು ರೂಪಿಸಿದ್ದ. ಯೋಜನೆಯಂತೆ ಮಹಿಳೆ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರಾಕೇಶ್ ಬೈಕ್ನಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತ ನಡೆದ ತಕ್ಷಣವೇ ಮತ್ತೊಂದು ಆಟೋದಲ್ಲಿ ಬಂದ ಆರೋಪಿಗಳು ರಕ್ಷಕರಂತೆ ನಟಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ನಡುವೆ ಮಂಜುನಾಥ್ ಎಂಬ ಆರೋಪಿ ಮಹಿಳೆಯ ಪರ್ಸ್ನಲ್ಲಿದ್ದ ಮನೆ ಕೀಲಿಯನ್ನು ಕದ್ದು, ನೇರವಾಗಿ ಮನೆಗೆ ತೆರಳಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರಿಂದ ಆಧಾರ್ ಕಾರ್ಡ್ ಬೇಕು ಎಂದು ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮತ್ತೊಂದೆಡೆ ರಾಕೇಶ್ ಸಂಚಾರ ಪೊಲೀಸ್ ಠಾಣೆಗೆ ತೆರಳಿ, ‘ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಮಹಿಳೆಯನ್ನು ನಾನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದೇನೆ’ ಎಂದು ಸುಳ್ಳು ದೂರು ನೀಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ.
ಆದರೆ ಮಹಿಳೆಯ ಮನೆಯಲ್ಲಿ ನಡೆದ ಕಳ್ಳತನ ಯತ್ನದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪ್ರಕರಣ ಭೇದಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ವಿಜಯಲಕ್ಷ್ಮಿ ಮೃತಪಟ್ಟಿದ್ದು, ಪ್ರಕರಣ ಕೊಲೆ ತಿರುವು ಪಡೆದುಕೊಂಡಿದೆ.
ಪ್ರಕರಣ ಸಂಬಂಧ ರಾಕೇಶ್, ಚೇತನ್, ಪ್ರದೀಪ್, ಯೋಹಾನ್ ಸೇರಿ ಐವರನ್ನು ಬಂಧಿಸಲಾಗಿದೆ. ಇದೇ ವೇಳೆ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಮಂಜುನಾಥ್ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಸದ್ಯ ಆರೋಪಿಗಳ ವಿರುದ್ಧ ಕೊಲೆ, ಸಂಚು ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



