ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆನ್ಲೈನ್ ಮೂಲಕ ನಡೆಯುತ್ತಿರುವ ಔಷಧಿ ಮಾರಾಟವನ್ನು ತಕ್ಷಣ ತಡೆಹಿಡಿಯಬೇಕು ಎಂದು ಆಗ್ರಹಿಸಿ ಔಷಧ ವ್ಯಾಪಾರಸ್ಥರ ಸಂಘ ನೀಡಿದ್ದ ಬಂದ್ ಕರೆಗೆ ಬುಧವಾರ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ತಾಲೂಕಿನ ಬಹುತೇಕ ಮೆಡಿಕಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದರಿಂದ ನಿತ್ಯದ ಔಷಧಿಗಾಗಿ ಬಂದ ಸಾರ್ವಜನಿಕರು ಪರದಾಡುವಂತಾಯಿತು. ಆದರೂ ತುರ್ತು ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗದಂತೆ ವ್ಯಾಪಾರಸ್ಥರು ಅಗತ್ಯ ಔಷಧಿ ಪೂರೈಕೆಗೆ ಕ್ರಮ ಕೈಗೊಂಡಿದ್ದರು.
ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಔಷಧ ವ್ಯಾಪಾರಸ್ಥರು ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಧನಂಜಯ ಎಂ. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ವೇಳೆ ಮಾತನಾಡಿದ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಇ-ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುತ್ತಿರುವ ಕಾರ್ಪೊರೇಟ್ ಕಂಪನಿಗಳು ಭಾರೀ ಪ್ರಮಾಣದ ರಿಯಾಯಿತಿ ನೀಡುವ ಮೂಲಕ ಸ್ಥಳೀಯ ವ್ಯಾಪಾರಸ್ಥರ ಬದುಕಿಗೆ ಸಂಕಷ್ಟ ತಂದಿವೆ ಎಂದು ಆರೋಪಿಸಿದರು.
ಆನ್ಲೈನ್ ಔಷಧಿ ಮಾರಾಟದಿಂದ ಸ್ಥಳೀಯ ಮೆಡಿಕಲ್ ಅಂಗಡಿಗಳ ವಹಿವಾಟು ಕುಸಿಯುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾವಿರಾರು ಔಷಧ ವ್ಯಾಪಾರಸ್ಥರು ನಿರುದ್ಯೋಗಿಗಳಾಗುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು.
ಗದಗ ಜಿಲ್ಲೆಯಲ್ಲಿ ಸುಮಾರು 480ಕ್ಕೂ ಹೆಚ್ಚು ಔಷಧ ಅಂಗಡಿಗಳು ಬಂದ್ನಲ್ಲಿ ಭಾಗವಹಿಸಿ ಆನ್ಲೈನ್ ಔಷಧಿ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ ಎಂದು ತಿಳಿಸಿದರು.
ಮೆಡಿಕಲ್ ಅಂಗಡಿಗಳು ಬಂದ್ ಆಗಿದ್ದರೂ ಮಾನವೀಯತೆಯ ದೃಷ್ಟಿಯಿಂದ ತುರ್ತು ಸೇವೆಗೆ ಅಗತ್ಯ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಧನಂಜಯ ಎಂ., ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿನಾಯಕ ಹೆಬ್ಬಳ್ಳಿ, ಆನಂದ ಓದು, ಮಲ್ಲಿಕಾರ್ಜುನ ದೊಡ್ಡೂರ, ಸಿ.ಆರ್. ಪಾಟೀಲ, ಗಂಗಾಧರ ಮೆಕ್ಕಿ, ಶಿವಪುತ್ರಪ್ಪ ಮಲ್ಲಾಡದ, ಪ್ರಕಾಶ ವಡಕಣ್ಣವರ, ಮಲ್ಲಿಕಾರ್ಜುನ ಕೊಟಗಿ, ರಂಗನಾಥ ಬದಿ, ಬಸವರಾಜ ಕೂಸನೂರ, ಜಯಣ್ಣ ಮೇಗಿಲಮನಿ, ಪ್ರಸಾದ ಗುಡಗೇರಿ, ಸಾಹಿಲ್ ಡಿ., ಫಕ್ಕೀರಸ್ವಾಮಿ ದಿಗಂಬರಮಠ, ಎಸ್.ಬಿ. ಮುಳಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಆನ್ಲೈನ್ ಔಷಧಿ ಮಾರಾಟದಿಂದ ಸ್ಥಳೀಯ ಮೆಡಿಕಲ್ ಅಂಗಡಿಗಳ ವಹಿವಾಟು ಕುಸಿಯುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾವಿರಾರು ಔಷಧ ವ್ಯಾಪಾರಸ್ಥರು ನಿರುದ್ಯೋಗಿಗಳಾಗುವ ಪರಿಸ್ಥಿತಿ ಎದುರಾಗಲಿದೆ.”ಚಂದ್ರಶೇಖರಗೌಡ ಪಾಟೀಲಅಧ್ಯಕ್ಷರು, ತಾಲೂಕು ಔಷಧ ವ್ಯಾಪಾರಸ್ಥರ ಸಂಘ



