ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ವಯಸ್ಸು 80 ದಾಟಿದರೂ ದುಡಿದು ತಿನ್ನಬೇಕು ಎನ್ನುವ ಛಲ ಮಾತ್ರ ಕುಂದಿಲ್ಲ. ದೇಹದಲ್ಲಿ ಶಕ್ತಿ ಇರುವವರೆಗೆ ಕೆಲಸ ಮಾಡಲೇಬೇಕು ಎನ್ನುವ ಹಠದಿಂದ ವೀರಾಪುರ ಗ್ರಾಮದ ಹನಮವ್ವ ಹನಮಪ್ಪ ಮೊಹಿತೆ ಕಳೆದ 20 ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಗ್ರಾಮದ ನಿವಾಸಿಯಾದ ಹನಮವ್ವ ಅವರಿಗೆ ಪತಿ ಇಲ್ಲ. ಇಬ್ಬರು ಗಂಡು ಮಕ್ಕಳು ಇದ್ದರೂ ಕುಟುಂಬದ ಸಂಕಷ್ಟ ಮಾತ್ರ ಕಡಿಮೆಯಾಗಿಲ್ಲ. ಒಬ್ಬ ಮಗ ಬೇರೆ ಮನೆ ಮಾಡಿಕೊಂಡಿದ್ದರೆ, ಮತ್ತೊಬ್ಬ ಮಗ ಎಂಟು ವರ್ಷಗಳ ಹಿಂದೆ ಕೆಲಸಕ್ಕೆ ಹೋದವನು ಮರಳಿ ಮನೆಗೆ ಬಂದಿಲ್ಲ. ಇದೀಗ ಸೊಸೆಯೊಂದಿಗೆ ಜೀವನ ಸಾಗಿಸುತ್ತಿರುವ ಹನಮವ್ವ, ತಮ್ಮ ಎರಡು ಎಕರೆ ಒಣಭೂಮಿಯಿಂದ ಜೀವನ ಸಾಗುವುದು ಕಷ್ಟವೆಂದು ಅರಿತು ನರೇಗಾ ಯೋಜನೆಯ ಮೊರೆ ಹೋಗಿದ್ದಾರೆ.
ಬೇಸಿಗೆ ಸಮಯದಲ್ಲಿ ಗ್ರಾಮದಲ್ಲಿ ಕೆಲಸ ಸಿಗದ ಸಂದರ್ಭಗಳಲ್ಲಿ ನರೇಗಾ ಯೋಜನೆಯೇ ಇವರ ಕುಟುಂಬಕ್ಕೆ
ಆಧಾರವಾಗಿದೆ. ಸೊಸೆಯೊಂದಿಗೆ ಕಾಮಗಾರಿಗೆ ತೆರಳಿ ಇಂದಿಗೂ ಉತ್ಸಾಹದಿಂದ ದುಡಿಯುತ್ತಿರುವ ಹನಮವ್ವ ಗ್ರಾಮದಲ್ಲೇ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನೊಬ್ಬ ಹಿರಿಯ ಮಹಿಳೆ ಹನಮವ್ವ ಯಲ್ಲಪ್ಪ ಮೊಹಿತೆ ಅವರಿಗೂ 78 ವರ್ಷ ವಯಸ್ಸು. ಆದರೂ ಉದ್ಯೋಗ ಖಾತ್ರಿ ಕೆಲಸ ಆರಂಭವಾದರೆ ಸಾಕು, ನಮೂನೆ-6ರಲ್ಲಿ ಹೆಸರು ನೋಂದಾಯಿಸಿಕೊಂಡು ಕೆಲಸಕ್ಕೆ ಬರುತ್ತಾರೆ.



