ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಇದೀಗ ಬಹುತೇಕ ಖಚಿತವಾಗಿದೆ. ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರು ಸ್ಫೋಟಕ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ದೇಶಪಾಂಡೆ, “ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ರಾಜೀನಾಮೆ ನಿರ್ಧಾರ ತಿಳಿಸಿ ಬಂದಿದ್ದಾರೆ. ನಾಳೆಯೇ ರಾಜೀನಾಮೆ ಕೊಡ್ತೀನಿ ಅಂತ ನಮಗೆ ಹೇಳಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಒತ್ತಾಯಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಇದುವರೆಗೆ ಊಹಾಪೋಹಗಳ ಮಟ್ಟದಲ್ಲಿದ್ದ ರಾಜೀನಾಮೆ ಚರ್ಚೆಗೆ ದೇಶಪಾಂಡೆ ಅವರ ಈ ಹೇಳಿಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ.
ಇನ್ನೊಂದೆಡೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. “ರಾಜೀನಾಮೆ ಕುರಿತ ಸುದ್ದಿಗಳಿಂದ ನಮಗೂ ಕಳವಳ ಉಂಟಾಯಿತು. ಸಿಎಂ ಮುಂದೆ ನಮ್ಮ ಮನವಿಯನ್ನು ಇಟ್ಟಿದ್ದೇವೆ. ಆದರೆ ಅವರು ನಮ್ಮ ಎದುರು ಒಂದು ಮಾತನ್ನೂ ಆಡಲಿಲ್ಲ. ಸಂಪೂರ್ಣ ಮೌನವಾಗಿದ್ದರು” ಎಂದು ಹೇಳಿದ್ದಾರೆ.
ರಾಜಕೀಯ ಬೆಳವಣಿಗೆಗಳ ನಡುವೆಯೇ ಸಿದ್ದರಾಮಯ್ಯ ಅವರ ಮೌನ ಮತ್ತು ದೇಶಪಾಂಡೆ ಅವರ ಬಹಿರಂಗ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಈಗ ಅಂತಿಮ ಹಂತ ತಲುಪಿದೆ ಎಂಬ ಸಂದೇಶ ನೀಡಿದೆ.



