ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಅಧಿಕ ಮಾಸದ ಪುಣ್ಯಕಾಲದ ಅಂಗವಾಗಿ ಇಲ್ಲಿನ ಎಸ್ಎಸ್ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ ಹಾಗೂ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮವು ಭಕ್ತಿಭಾವದಿಂದ ಜರುಗಿತು.
ಶ್ರೀ ಜಗದಂಬಾ ದೇವಿಯ 111ನೇ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ 111 ಮುತ್ತೈದೆಯರು ಕೆಂಪು ಸೀರೆ ಧರಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಿಗೆ ಕುಂಕುಮಾರ್ಚನೆ ಸಲ್ಲಿಸಿದರು.
ಅರ್ಚಕರು ದೇವಿಯ ಸಹಸ್ರನಾಮ ಪಠಿಸುತ್ತಿದ್ದ ವೇಳೆ ಮುತ್ತೈದೆಯರು ಏಕಕಾಲದಲ್ಲಿ ಕುಂಕುಮಾರ್ಚನೆ ಸಲ್ಲಿಸಿದ ದೃಶ್ಯ ಭಕ್ತರ ಗಮನ ಸೆಳೆಯಿತು. ದೇವಸ್ಥಾನದ ಆವರಣ ಭಜನೆ, ದೇವಿಯ ನಾಮಸ್ಮರಣೆ ಹಾಗೂ ಜಯಘೋಷಗಳಿಂದ ಭಕ್ತಿಮಯ ವಾತಾವರಣದಲ್ಲಿ ಕಂಗೊಳಿಸಿತು.
ಮುಂಜಾನೆ ದೇವಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರ ಕಾರ್ಯಕ್ರಮಗಳು ನೆರವೇರಿದವು. ಶ್ರೀ ಅಂಬಾಭವಾನಿ ದೇವಿಗೆ ಕುಂಕುಮ ಹಾಗೂ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿದ್ದು, ದೇವಿಯ ದರ್ಶನಕ್ಕಾಗಿ ಭಕ್ತರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 111 ಮುತ್ತೈದೆಯರಿಗೆ ಶ್ರೀ ಅಂಬಾಭವಾನಿ ದೇವಿಯ ಪಂಚಲೋಹ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಯಿತು. ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಎಸ್ಎಸ್ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
“ಅಧಿಕ ಮಾಸದಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸುತ್ತವೆ. ದೇವಿಯ ಆರಾಧನೆಯಿಂದ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ”
ಲೋಕನಾಥ ಕಬಾಡಿ, ಪಂಚ ಕಮಿಟಿ ಅಧ್ಯಕ್ಷ



