ತುಮಕೂರು: ಪಾವಗಡದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ವೆಂಕಟರಮಣಪ್ಪ ಅವರ ನಿಧನಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಂಬನಿ ಮಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅವರು, ಮೃತರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, “ವೆಂಕಟರಮಣಪ್ಪ ಅವರ ಅಗಲಿಕೆ ಅತ್ಯಂತ ದುಃಖದ ಸಂಗತಿ. ಶೋಷಿತ ವರ್ಗಗಳ ಪರ ಹೋರಾಟ ನಡೆಸಿ ಜನಪ್ರಿಯತೆ ಗಳಿಸಿದ್ದ ಅಪರೂಪದ ನಾಯಕ ಅವರು” ಎಂದು ಹೇಳಿದರು.
ತುಮಕೂರು ಜಿಲ್ಲೆಯ ರಾಜಕೀಯದಲ್ಲಿ ವೆಂಕಟರಮಣಪ್ಪ ಅವರ ಕೊಡುಗೆ ಅಪಾರವಾಗಿದೆ. ಸಚಿವರಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಆದ್ಯತೆ ನೀಡಿದ್ದರು. ಜನರೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವೇ ಅವರನ್ನು ವಿಭಿನ್ನ ನಾಯಕನನ್ನಾಗಿ ಮಾಡಿತ್ತು ಎಂದು ಪರಮೇಶ್ವರ್ ಸ್ಮರಿಸಿದರು.
“ನನಗೂ ಅವರು ಅತ್ಯಂತ ಆತ್ಮೀಯರಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಒಬ್ಬ ಹಿರಿಯ ಅನುಭವಿ ನಾಯಕರನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಸ್ಥರಿಗೆ ನೀಡಲಿ” ಎಂದು ಸಂತಾಪ ಸೂಚಿಸಿದರು.



