ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿರುವ ವಿಷಯವೆಂದರೆ ತಿರುಚ್ಚಿ ಈಸ್ಟ್ ಕ್ಷೇತ್ರದ ಉಪಚುನಾವಣೆ. ಮುಖ್ಯಮಂತ್ರಿ ವಿಜಯ್ ಅವರು ರಾಜೀನಾಮೆ ನೀಡಿದ್ದ ಈ ಕ್ಷೇತ್ರದಿಂದ ಇದೀಗ ಖ್ಯಾತ ನಟ, ನಿರ್ದೇಶಕ ಹಾಗೂ ಕೊರಿಯೋಗ್ರಾಫರ್ ರಾಘವ್ ಲಾರೆನ್ಸ್ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಜೋರಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ ಗರಿಗೆದರುವಂತಾಗಿದೆ. ವಿಜಯ್ ಅವರ ಪಕ್ಷವಾದ ಟಿವಿಕೆ ಪರವಾಗಿ ಲಾರೆನ್ಸ್ ಅಭ್ಯರ್ಥಿಯಾಗಬಹುದು ಎಂಬ ಮಾತುಗಳು ಅವರ ಅಭಿಮಾನಿಗಳ ಮಧ್ಯೆ ವೇಗವಾಗಿ ಹರಿದಾಡುತ್ತಿವೆ.
ಚಿತ್ರರಂಗದಲ್ಲಿ ಹೆಸರು ಮಾಡಿದ ರಾಘವ್ ಲಾರೆನ್ಸ್, ದೀರ್ಘಕಾಲದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಅನಾಥ ಮಕ್ಕಳು, ವಿಕಲಚೇತನರು ಮತ್ತು ವೃದ್ಧರ ನೆರವಿಗಾಗಿ ಅವರು ನಡೆಸುತ್ತಿರುವ ಕಾರ್ಯಗಳು ಸಾರ್ವಜನಿಕ ಮೆಚ್ಚುಗೆ ಪಡೆದಿವೆ. ಇದೇ ಕಾರಣಕ್ಕೆ ರಾಜಕೀಯ ಪ್ರವೇಶ ಮಾಡಿದರೆ ಅವರಿಗೆ ಜನಬೆಂಬಲ ದೊರೆಯಬಹುದು ಎಂಬ ಅಂದಾಜು ವ್ಯಕ್ತವಾಗುತ್ತಿದೆ.
ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ತಿರುಚ್ಚಿ ಈಸ್ಟ್ ಉಪಚುನಾವಣೆ ದಿನಾಂಕವೂ ಇನ್ನೂ ಪ್ರಕಟವಾಗಿಲ್ಲ. ಹೀಗಾಗಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಸಮಯವಿದೆ ಎಂದು ಮೂಲಗಳು ತಿಳಿಸಿವೆ.



