ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಶಿರಹಟ್ಟಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಬೆಳವಣಿಗೆಯಲ್ಲಿ, ವಕೀಲ ಹಾಗೂ ಹೋರಾಟಗಾರ ರವಿಕಾಂತ ಅಂಗಡಿ ಅವರು ಚುನಾವಣಾ ಕಣಕ್ಕಿಳಿಯಬೇಕು ಎಂದು ಶಿರಹಟ್ಟಿ ತಾಲೂಕು ವಕೀಲರ ಸಂಘ ಆಗ್ರಹಿಸಿದೆ.
ಪಟ್ಟಣದ ವಕೀಲರ ಸಂಘದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ವೈ. ಗೊಬ್ಬರಗುಂಪಿ, “ಶಿರಹಟ್ಟಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಿರುವ ವಕೀಲ ರವಿಕಾಂತ ಅಂಗಡಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು,” ಎಂದು ಒತ್ತಾಯಿಸಿದರು.
ರವಿಕಾಂತ ಅಂಗಡಿ ಅವರು ಹಲವು ವರ್ಷಗಳಿಂದ ಜನಪರ ಹಾಗೂ ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ಭಾಗದ ರೈತರ ಜಮೀನು ರಕ್ಷಣೆ, ರೈತರ ಹಕ್ಕುಗಳ ಪರ ಹೋರಾಟ, ಸಾಮಾಜಿಕ ನ್ಯಾಯ ಹಾಗೂ ಪರಿಸರ ಸಂರಕ್ಷಣೆಯಂತಹ ವಿಚಾರಗಳಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಸಾಮಾನ್ಯ ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣ, ಕಾನೂನು ಕ್ಷೇತ್ರದಲ್ಲಿನ ಅನುಭವ ಹಾಗೂ ಜನಸೇವೆಯ ಬದ್ಧತೆಯಿಂದ ರವಿಕಾಂತ ಅಂಗಡಿ ಅವರು ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೊಸ ಚಿಂತನೆ ಹಾಗೂ ಪರಿಣಾಮಕಾರಿ ನಾಯಕತ್ವ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಶಿರಹಟ್ಟಿ ಮತಕ್ಷೇತ್ರದ ಜನರು ಅಭಿವೃದ್ಧಿಪರ ಹಾಗೂ ಜನರ ನಡುವೆ ನಿರಂತರ ಸಂಪರ್ಕ ಹೊಂದಿರುವ ನಾಯಕತ್ವ ನಿರೀಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಕಾಂತ ಅಂಗಡಿ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಜನರ ಆಶಯವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎ.ವಿ. ಮಾನೆ, ಕಾರ್ಯದರ್ಶಿ ಎ.ಎ. ಬೇವಿನಗಿಡದ, ಜಂಟಿ ಕಾರ್ಯದರ್ಶಿ ಮಹೇಶ ದಾನಪ್ಪಗೌಡರ, ಖಜಾಂಚಿ ಶ್ರೀಮತಿ ಬಂಡಿವಡ್ಡರ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಜನರ ಪರ ಹೋರಾಟಕ್ಕೆ ಸದಾ ಸಿದ್ಧ
ಸಭೆಯಲ್ಲಿ ಮಾತನಾಡಿದ ವಕೀಲ ರವಿಕಾಂತ ಅಂಗಡಿ, “ನಾನು ಜನರ ಹಾಗೂ ರೈತರ ಸಮಸ್ಯೆಗಳ ಪರ ಸಾಕಷ್ಟು ಹೋರಾಟಗಳನ್ನು ನಡೆಸಿದ್ದೇನೆ. ಮುಂದೆಯೂ ಜನಪರ ಹಾಗೂ ರೈತಪರ ಕಾರ್ಯಗಳಿಗೆ ಸದಾ ಸಿದ್ಧನಿದ್ದೇನೆ. ಎಲ್ಲರ ಆಶಯದಂತೆ ಸ್ಪರ್ಧಿಸುವ ಅವಕಾಶ ದೊರೆತಲ್ಲಿ ಜನರ ಸೇವೆಗೆ ಇನ್ನಷ್ಟು ಬಲ ದೊರೆಯುತ್ತದೆ,” ಎಂದು ಹೇಳಿದರು.



