ವಿಜಯಸಾಕ್ಷಿ ಸುದ್ದಿ, ಗದಗ: ರಕ್ತದಾನವು ಕೇವಲ ಮತ್ತೊಬ್ಬರ ಜೀವ ಉಳಿಸುವ ಪುಣ್ಯದ ಕೆಲಸವಲ್ಲ, ಅದು ದಾನಿಯ ಆರೋಗ್ಯಕ್ಕೂ ವರದಾನ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ರಕ್ತ ತಪಾಸಕ ಡಾ. ದತ್ತಾತ್ರೇಯ ವೈಕುಂಠೆ ಕರೆ ನೀಡಿದರು.
ನಗರದ ಶಾಸ್ತ್ರಿ ಮಹಿಳಾ ಬಿ.ಎಡ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಜೆಡಿಎಸ್ ಶಿಕ್ಷಣ ಸಂಸ್ಥೆ ಗದಗ ಹಾಗೂ ಭಾವಸಾರ ವಿಷನ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪೌರತ್ವ ತರಬೇತಿ ಹಾಗೂ ಉಚಿತ ರಕ್ತ ತಪಾಸಣಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದ ವೈಜ್ಞಾನಿಕ ಮಹತ್ವವನ್ನು ವಿವರಿಸಿದ ಅವರು, “ಇಂದು ವಿಜ್ಞಾನ ಎಷ್ಟೇ ಮುಂದುವರೆದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ನಾವು ರಕ್ತದಾನ ಮಾಡಿದಾಗ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿ ಚುರುಕುಗೊಳ್ಳುತ್ತದೆ. ಇದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸಿ ಆರೋಗ್ಯ ಉತ್ತಮವಾಗುತ್ತದೆ,” ಎಂದರು.
ಪ್ರತಿಯೊಬ್ಬರೂ ತಮ್ಮ ರಕ್ತದ ಗುಂಪಿನ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರಬೇಕು. ಅಪಘಾತ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ಇದು ಜೀವ ಉಳಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಹಬ್ಬ-ಹರಿದಿನಗಳಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡುವ ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಎಸ್.ಬಿ. ಹೊನ್ನಗುಡಿ ಮಾತನಾಡಿ, “ಶಿಕ್ಷಕಿಯರಾಗುವ ನೀವು ಸಮಾಜಕ್ಕೆ ಮಾದರಿಯಾಗಬೇಕು. ನಿಮ್ಮ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು,” ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಶಿಬಿರದಲ್ಲಿ ಡಾ. ದತ್ತಾತ್ರೇಯ ವೈಕುಂಠೆ ಅವರು 95 ಬಿ.ಎಡ್ ಪ್ರಶಿಕ್ಷಣಾರ್ಥಿಗಳ ರಕ್ತದ ಗುಂಪು ತಪಾಸಣೆ ನಡೆಸಿ, ಬಳಿಕ ರಕ್ತದ ಗುಂಪು ನಮೂದಿಸಿದ ಗುರುತಿನ ಚೀಟಿಗಳನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಹರೀಶ ವೈಕುಂಠೆ, ನಾಗರಾಜ ವಾದೋನೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಡಾ. ಡಿ.ಎಂ. ನದಾಫ್, ವಿ.ಕೆ. ಅರಳಿಮಠ, ಗಂಗಾಧರ, ಆರ್.ಎ. ಕೆರೂರ, ಸತೀಶ, ಈಶ್ವರ, ಶ್ರೀಮತಿ ಎನ್.ಎಂ. ಮಟ್ಟಿ ಉಪಸ್ಥಿತರಿದ್ದರು.
ಪ್ರೊ. ಎಂ. ಸಂದೀಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಭಾಗ್ಯ ಚೂರಿಮಠ ಹಾಗೂ ಭುವನೇಶ್ವರಿ ಕಮಡೊಳ್ಳಿ ಸಂದರ್ಭೋಚಿತವಾಗಿ ಮಾತನಾಡಿದರು. ಸವಿತಾ ಮತ್ತು ತಂಡ ಪ್ರಾರ್ಥಿಸಿದರು. ಅನುರಾಧಾ ಬೆಟಗೇರಿ ಹಾಗೂ ಗೌರಮ್ಮ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ನೀಲಮ್ಮ ಐದನಾಳ ವಂದಿಸಿದರು.
“ಶಾಲಾ ಹಂತದಲ್ಲೇ ಮಕ್ಕಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ರಕ್ತದ ಗುಂಪಿನ ಮಹತ್ವ ಹಾಗೂ ರಕ್ತದಾನದ ಅಗತ್ಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು.”
ಡಾ. ದತ್ತಾತ್ರೇಯ ವೈಕುಂಠೆ



