ವಿಜಯಸಾಕ್ಷಿ ಸುದ್ದಿ, ಗದಗ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಜೂನ್ 15ರಿಂದ 30ರವರೆಗೆ ಗದಗ ನಗರದಲ್ಲಿ 15 ದಿನಗಳ ಯೋಗ ಮಹೋತ್ಸವ ಹಾಗೂ ಉಚಿತ ಯೋಗ-ಯೋಗಾಸನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸ್ಥಳೀಯ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗವು ಭಾರತೀಯ ಸಂಸ್ಕೃತಿಯ ಮೂಲ ಬೇರುವಾಗಿದ್ದು, ಇಡೀ ವಿಶ್ವಕ್ಕೆ ಭಾರತದ ಪರಿಚಯವನ್ನು ಯೋಗ ಮತ್ತು ಆಧ್ಯಾತ್ಮಿಕತೆ ಮಾಡಿಕೊಟ್ಟಿವೆ. ಯೋಗವು ಕೇವಲ ಆಸನಗಳ ಸಮೂಹವಲ್ಲ, ಅದು ಆರೋಗ್ಯಕರ ಮತ್ತು ಮೌಲ್ಯಯುತ ಜೀವನಕ್ಕೆ ದಾರಿದೀಪವಾಗಿರುವ ಜೀವನ ಪದ್ಧತಿಯಾಗಿದೆ ಎಂದು ಹೇಳಿದರು.
ಇಂದಿನ ಒತ್ತಡದ ಜೀವನಶೈಲಿ, ಮಾನಸಿಕ ಆತಂಕ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಯೋಗ ಪರಿಣಾಮಕಾರಿ ಪರಿಹಾರವಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಅತ್ಯುತ್ತಮ ಮಾರ್ಗವಾಗಿದೆ. ವಿಶ್ವಸಂಸ್ಥೆಯು ಸಹ ಯೋಗದ ಮಹತ್ವವನ್ನು ಗುರುತಿಸಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ ಎಂದು ತಿಳಿಸಿದರು.
ಜೂನ್ 15ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 7.30 ಗಂಟೆಯವರೆಗೆ ನಗರದ ಮೂರು ಕೇಂದ್ರಗಳಲ್ಲಿ ಏಕಕಾಲಕ್ಕೆ ಶಿಬಿರ ನಡೆಯಲಿದ್ದು, ಪ್ರಾರ್ಥನೆ, ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದರು. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಅದು ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತರುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಗದಗ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಿ ಯೋಗದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಸಂಬಂಧಿಸಿದ ಕೇಂದ್ರಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮೂರು ಕೇಂದ್ರಗಳಲ್ಲಿ ಶಿಬಿರ
- ಬ್ರಹ್ಮಕುಮಾರಿಸ್, ಬಸವೇಶ್ವರ ನಗರ (ಶಾಪೂರಪೇಟೆ), ಗದಗ
- ಬ್ರಹ್ಮಕುಮಾರಿಸ್, ಸಿದ್ಧರಾಮೇಶ್ವರ ನಗರ (ವಡ್ಡರಗೇರಿ), ಗದಗ
- ಬ್ರಹ್ಮಕುಮಾರಿಸ್, ಹೊಸಪೇಟೆ ಚೆಕ್ಪೋಸ್ಟ್, ಬೆಟಗೇರಿ
“ಯೋಗವು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವ ದಿವ್ಯ ಔಷಧಿಯಾಗಿದೆ. ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು.”ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ, ಸಂಚಾಲಕರು



