ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಿರಿಯ ಕಾಂಗ್ರೆಸ್ ನಾಯಕ, ಶಾಸಕ ಎಚ್.ಕೆ. ಪಾಟೀಲರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಗದಗ ನಗರದಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.
ದಿ. ಕಾಟನ್ ಸೇಲ್ ಸೊಸೈಟಿ ಆವರಣದಿಂದ ಆರಂಭವಾದ ಮೆರವಣಿಗೆ ಭೂಮರಡ್ಡಿ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಟಾಂಗಾ ಕೂಟ, ಬಸವೇಶ್ವರ ಸರ್ಕಲ್, ಪಂಚರ ಹೊಂಡ ಹಾಗೂ ಐತಿಹಾಸಿಕ ಜೋಡ ಮಾರುತಿ ದೇವಸ್ಥಾನದ ಮಾರ್ಗವಾಗಿ ಮುಳಗುಂದ ನಾಕಾವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಎಚ್.ಕೆ. ಪಾಟೀಲರ ಪರ ಘೋಷಣೆಗಳನ್ನು ಕೂಗಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಿದರು.
ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್ಗಳ ಜೊತೆಗೆ ಗದಗ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆಟೋ ಚಾಲಕರು, ರೈತರು, ಯುವಕರು, ಮಹಿಳೆಯರು, ಎತ್ತು ಚಕ್ಕಡಿಗಳು ಹಾಗೂ ಟ್ರ್ಯಾಕ್ಟರ್ಗಳ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಎಚ್.ಕೆ. ಪಾಟೀಲರ ರಾಜಕೀಯ ಅನುಭವ, ಆಡಳಿತಾತ್ಮಕ ಸಾಮರ್ಥ್ಯ ಹಾಗೂ ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಬಿಂಬಿಸುವ ಬ್ಯಾನರ್ಗಳು ಮತ್ತು ಫಲಕಗಳು ರಾರಾಜಿಸುತ್ತಿದ್ದವು. ಬಿರು ಬಿಸಿಲಿನ ನಡುವೆಯೂ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಪ್ರತಿಭಟನಾಕಾರರಿಗಾಗಿ ಸ್ಥಳೀಯ ಮುಖಂಡರು ಮಜ್ಜಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ಸಮಾವೇಶದಲ್ಲಿ ಏಕಸ್ವರದ ಆಗ್ರಹ
ಮುಳಗುಂದ ನಾಕಾದಲ್ಲಿ ಮೆರವಣಿಗೆ ಬೃಹತ್ ಸಮಾವೇಶವಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಎಚ್.ಕೆ. ಪಾಟೀಲ ಅವರು ಕೇವಲ ಗದಗ ಕ್ಷೇತ್ರದ ಶಾಸಕರಲ್ಲ, ಇಡೀ ರಾಜ್ಯದ ರಾಜಕೀಯ ಆಸ್ತಿ. ಆಡಳಿತ, ಕಾನೂನು, ಅಭಿವೃದ್ಧಿ ಮತ್ತು ಸಾರ್ವಜನಿಕ ಜೀವನದ ಅಪಾರ ಅನುಭವ ಹೊಂದಿರುವ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವುದು ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಹಾವೇರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರಪ್ಪ ಬಸೇಗಣ್ಣಿ, ಸುಜಾತಾ ದೊಡ್ಡಮನಿ, ಗುರಣ್ಣ ಬಳಗಾನೂರ, ರವಿ ಮೂಲಿಮನಿ, ಬಸವರಾಜ ಸುಂಕಾಪೂರ, ನೀಲಮ್ಮ ಬೋಳನವರ, ಅಶೋಕ ಮಂದಾಲಿ, ಬರಕತ್ ಅಲಿ ಮುಲ್ಲಾ, ವಾಸಣ್ಣ ಕುರುಡಗಿ, ಬಸವರಾಜ ಕಡೆಮನಿ, ಶಾಂತಣ್ಣ ಮುಳವಾಡ, ಬಿ.ಆರ್. ದೇವರಡ್ಡಿ, ಮಹಮ್ಮದ್ ಶಾಲಗಾರ, ಮಾಂತೇಶ ಮಡಿವಾಳರ, ಪರಪ್ಪ ಕಮತರ, ಸರಫರಾಜ್ ಬಬರ್ಚಿ, ಮೋಹನ ದುರಗಣ್ಣವರ, ಚಂದ್ರಪ್ಪ ಕರಿಕಟ್ಟಿ, ಪೀರಸಾಬ ಕೌತಾಳ, ಅಕ್ಬರ್ ಸಾಬ್ ಬಬರ್ಚಿ, ಎಸ್.ಪಿ. ಬಳಿಗಾರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
“ಎಚ್.ಕೆ. ಪಾಟೀಲರು ಈ ರಾಜ್ಯದ ನೆಲ, ಜಲ, ಭಾಷೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಡಿದ ನಾಯಕರು. ಅವರ ಅನುಭವ ಮತ್ತು ದೂರದೃಷ್ಟಿ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಅಗತ್ಯವಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವುದು ಗದಗ ಜಿಲ್ಲೆಯ ಬೇಡಿಕೆಯಷ್ಟೇ ಅಲ್ಲ, ರಾಜ್ಯದ ಜನರ ಆಶಯವಾಗಿದೆ.”
ಸಯ್ಯದ್ ಖಾಲಿದ್ ಕೊಪ್ಪಳ
ಕಾಂಗ್ರೆಸ್ ಯುವ ಮುಖಂಡ



