ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಜುಗುಮಲೈನಲ್ಲಿ ಕೋತಿಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನವವಿವಾಹಿತೆಯೊಬ್ಬರು ಬೆಟ್ಟದ ತುದಿಯಿಂದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.
ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಮೃತ ದುರ್ದೈವಿ. ಕಳೆದ ತಿಂಗಳಷ್ಟೇ ವಿದೇಶದಲ್ಲಿ ಉದ್ಯೋಗದಲ್ಲಿರುವ ಸುರೇಶ್ (29) ಅವರೊಂದಿಗೆ ವಿವಾಹವಾಗಿದ್ದ ಅವರು, ಪತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಲು ಕಜುಗುಮಲೈನ ಪ್ರಸಿದ್ಧ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಮುಖ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ದಂಪತಿ ಬೆಟ್ಟದ ಮೇಲಿರುವ ಉಚಿಪಿಳ್ಳಯಾರ್ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಕೋತಿಗಳಿಗೆ ಹಣ್ಣು ನೀಡಲು ಮುಂದಾಗಿದ್ದರು. ಹಣ್ಣುಗಳಿಗಾಗಿ ಏಕಾಏಕಿ ಹತ್ತಾರು ಕೋತಿಗಳು ಅನಿತಾ ಅವರನ್ನು ಸುತ್ತುವರೆದಿದ್ದು, ಭಯಗೊಂಡ ಅವರು ಹಿಂದೆ ಸರಿಯುವಾಗ ಕಾಲು ಜಾರಿ ಬೆಟ್ಟದ ತುದಿಯಿಂದ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ.
ತೀವ್ರವಾಗಿ ಗಾಯಗೊಂಡ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಕಣ್ಣೆದುರೇ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ಪತಿ ಸುರೇಶ್ ಆಘಾತಕ್ಕೊಳಗಾಗಿದ್ದು, ಸ್ಥಳದಲ್ಲಿ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಜುಗುಮಲೈ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.



