ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕೆಎಸ್ಆರ್ಟಿಸಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಬಸ್ ಚಾಲಕ ಬಸವರಾಜ ಅಂಗಡಿ ಅವರಿಗೆ ಗಜೇಂದ್ರಗಡ ಬಸ್ ಘಟಕದಲ್ಲಿ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
31 ವರ್ಷಗಳ ಕಾಲ ಸಂಸ್ಥೆಯ ವಿವಿಧ ಘಟಕಗಳಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ ಬಸವರಾಜ ಅಂಗಡಿ, ಶಿಸ್ತು, ಸಮಯಪಾಲನೆ ಮತ್ತು ಸುರಕ್ಷಿತ ಚಾಲನೆಯ ಮೂಲಕ ಸಹೋದ್ಯೋಗಿಗಳು ಹಾಗೂ ಪ್ರಯಾಣಿಕರ ವಿಶ್ವಾಸ ಗಳಿಸಿದ್ದರು. 2005ರಲ್ಲಿ ಉತ್ತಮ ಚಾಲಕ ಪ್ರಶಸ್ತಿ ಪಡೆದಿದ್ದ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಘಟಕದ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಬಸವರಾಜ ಅಂಗಡಿ ಅವರು ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ವಿನಯಶೀಲತೆಯಿಂದ ಸಂಸ್ಥೆಯ ಗೌರವ ಹೆಚ್ಚಿಸಿದ ಸಿಬ್ಬಂದಿಯಾಗಿದ್ದು, ಅವರ ಸೇವೆ ಯುವ ಚಾಲಕರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ವಿ. ಮೈತ್ರಿ, ಗಜೇಂದ್ರಗಡ ಘಟಕ ವ್ಯವಸ್ಥಾಪಕ ಕೆ.ಎಸ್. ಜಿಗಳೂರ, ಸಿಬ್ಬಂದಿಗಳಾದ ಎಸ್.ಜಿ. ಜೇಡ್ರಾಮಕುಂಟಿ, ಡಿ.ವೈ. ನಾಲಬಂದ, ಮುಖಂಡರಾದ ಉಮೇಶ ಮೇಣಸಗಿ, ದೊಡ್ಡಬಸವರಾಜ ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ನಿವೃತ್ತ ಜೀವನ ಸುಖ, ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.



