ಬೆಂಗಳೂರು: ದರ್ಶನ್ಗೆ ಇಂದು ಹೊರಗಿನ ಶತ್ರುಗಳಿಗಿಂತ ಅಂಧಾಭಿಮಾನಿಗಳೇ ದೊಡ್ಡ ಸಂಕಷ್ಟವಾಗುತ್ತಿರುವ ಚಿತ್ರಣ ಕಾಣಿಸುತ್ತಿದೆ. ‘ಡಿ ಬಾಸ್’ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುತ್ತಿರುವ ಕೆಲ ಅಭಿಮಾನಿಗಳ ನಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ಗೆ ಮತ್ತಷ್ಟು ಕಾನೂನು ಬಿಗಿ ಉಂಟುಮಾಡುವ ಲಕ್ಷಣಗಳು ಗೋಚರಿಸುತ್ತಿವೆ.
ಪ್ರಮುಖ ಸಾಕ್ಷಿ ಸಂದೀಪ್ಗೆ ಬೆದರಿಕೆ ಹಾಕಿದ ಆರೋಪದಲ್ಲಿ ಡಿ ಕಂಪನಿ ಫ್ಯಾನ್ ಪೇಜ್ ಅಡ್ಮಿನ್ ಪುನೀತ್ ಸೇರಿದಂತೆ ಮೂವರು ಬಂಧನವಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಪುನೀತ್ ಇದೇ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ವ್ಯಕ್ತಿ. ಆದರೆ ಕಾನೂನಿಗೆ ಸಹಕರಿಸುವ ಬದಲು ಮತ್ತೊಬ್ಬ ಸಾಕ್ಷಿಯ ಹೇಳಿಕೆಯನ್ನು ಬದಲಾಯಿಸಲು ಯತ್ನಿಸಿದ್ದಾನೆ ಎಂಬ ಆರೋಪ ಈಗ ಆತನನ್ನೇ ಆರೋಪಿಗಳ ಪಟ್ಟಿಗೆ ಸೇರಿಸಿದೆ.
ಇದೇ ಪುನೀತ್ ಮಾಲೀಕತ್ವದ ಬಿಳಿ ಸ್ಕಾರ್ಪಿಯೋ ವಾಹನವನ್ನು ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಬಳಸಲಾಗಿದೆ ಎಂದು ತನಿಖೆಯಲ್ಲಿ ಉಲ್ಲೇಖವಾಗಿದೆ. ವಾಹನವನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ಇದರ ಹಿಂದೆ ಕೂಡ ದರ್ಶನ್ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ನಿಂದನೆ, ಅತ್ಯಾಚಾರದ ಬೆದರಿಕೆ ಪ್ರಕರಣದಲ್ಲೂ ಹಲವರು ಬಂಧನವಾಗಿದ್ದರು.
ಸಾಕ್ಷಿಗಳಿಗೆ ಬೆದರಿಕೆ, ತನಿಖೆಗೆ ಅಡ್ಡಿ, ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಯತ್ನಗಳು ಪ್ರಕರಣವನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು ಎಂದು ಕಾನೂನು ವಲಯ ಅಭಿಪ್ರಾಯಪಡುತ್ತಿದೆ. ಒಬ್ಬ ನಟನಿಗೆ ಅಭಿಮಾನಿಗಳು ಶಕ್ತಿಯಾಗಬೇಕು; ಆದರೆ ಕಾನೂನು ಉಲ್ಲಂಘಿಸುವ ಅಂಧಾಭಿಮಾನ ಕೊನೆಗೆ ಅದೇ ನಟನ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸುವ ಅಂಶವಾಗುವ ಸಾಧ್ಯತೆ ಹೆಚ್ಚಾಗಿದೆ.



