HomeGadag Newsಸರ್ವಧರ್ಮ ಸಾಧು-ಸಂತರಿಗೆ ಒಂದೇ ವೇದಿಕೆ

ಸರ್ವಧರ್ಮ ಸಾಧು-ಸಂತರಿಗೆ ಒಂದೇ ವೇದಿಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧಾರ್ಮಿಕ ಸಾಮರಸ್ಯ, ಸಾಮಾಜಿಕ ಜಾಗೃತಿ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಸರ್ವಧರ್ಮ ಸಾಧು, ಸಂತ, ಶರಣರ ರಾಜ್ಯ ಒಕ್ಕೂಟವನ್ನು ಅಬ್ಬಿಗೇರಿಯಲ್ಲಿ ಅಧಿಕೃತವಾಗಿ ರಚಿಸಿ, ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಮೀಪದ ಅಬ್ಬಿಗೇರಿಯ ಸದ್ಗುರು ಯಲ್ಲಾಲಿಂಗೇಶ್ವರ ಮಠದಲ್ಲಿ ಭಾನುವಾರ ವಿವಿಧ ಧರ್ಮಗಳ ಪೂಜ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯಮಟ್ಟದ ಸಂಘಟನೆಯ ಅಗತ್ಯತೆ ಕುರಿತು ಸುದೀರ್ಘ ಚರ್ಚೆ ನಡೆಸಿ, ಧಾರ್ಮಿಕ ಸಾಮರಸ್ಯ, ಆಧ್ಯಾತ್ಮಿಕ ಮೌಲ್ಯಗಳ ಪ್ರಸಾರ ಹಾಗೂ ಸಮಾಜದಲ್ಲಿ ಶಾಂತಿ-ಸಹಬಾಳ್ವೆ ವಾತಾವರಣ ನಿರ್ಮಾಣಕ್ಕೆ ಒಕ್ಕೂಟವನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು.

ಒಕ್ಕೂಟದ ಗೌರವಾಧ್ಯಕ್ಷರಾಗಿ ಮುಗುಳಖೊಡ ಜಿಡಗಾಮಠದ ಡಾ. ಷಡಕ್ಷರಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ರಾಜ್ಯಾಧ್ಯಕ್ಷರಾಗಿ ಅಬ್ಬಿಗೇರಿಯ ಸದ್ಗುರು ಯಲ್ಲಾಲಿಂಗೇಶ್ವರ ಮಠದ ಬಸವರಾಜ ಶರಣರು ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಇಟಗಿಯ ಮರುಳಸಿದ್ದೇಶ್ವರ ಪುಣ್ಯಾಶ್ರಮದ ಶಿವಶರಣ ಗದಿಗೆಪ್ಪಜ್ಜನವರು ಸರ್ವಾನುಮತದಿಂದ ಆಯ್ಕೆಯಾದರು.

ಸಭೆಯಲ್ಲಿ ಮಾತನಾಡಿದ ಧಾರ್ಮಿಕ ಮುಖಂಡರು, ಧರ್ಮಗಳ ನಡುವೆ ಪರಸ್ಪರ ಗೌರವ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯ ಇಂದು ಹೆಚ್ಚಾಗಿದ್ದು, ಈ ಒಕ್ಕೂಟವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮೌಲ್ಯಾಧಾರಿತ ಬದುಕಿನ ಸಂದೇಶವನ್ನು ರಾಜ್ಯಾದ್ಯಂತ ಸಾರಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಾದ್ಯಂತ ಧಾರ್ಮಿಕ ಸಾಮರಸ್ಯ, ನೈತಿಕ ಶಿಕ್ಷಣ, ಯುವಜನರಲ್ಲಿ ಮೌಲ್ಯಾಧಾರಿತ ಬದುಕಿನ ಅರಿವು, ಸಮಾಜಮುಖಿ ಸೇವಾ ಚಟುವಟಿಕೆಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಕೇಶವಾನಂದ ಮಹಾಸ್ವಾಮಿಗಳು, ಮರುಳಸಿದ್ದೇಶ್ವರ ಮಹಾಸ್ವಾಮಿಗಳು, ಮಳಿಯಯ್ಯ ಸ್ವಾಮಿಗಳು, ಮರುಳಸಿದ್ದಯ್ಯ ಸ್ವಾಮಿಗಳು, ಋಷಿಕುಮಾರ ಸ್ವಾಮಿಗಳು, ನಾಗರಾಜ ಸ್ವಾಮಿಗಳು, ಹುಚ್ಚಯ್ಯ ಸ್ವಾಮಿಗಳು, ಆನಂದಯ್ಯ ಸ್ವಾಮಿಗಳು, ಚಂದ್ರಶೇಖರಯ್ಯ ಹಿರೇಮಠ ಶ್ರೀಗಳು, ಶಿವಮುನಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೂಜ್ಯರು, ಧಾರ್ಮಿಕ ಮುಖಂಡರು, ಭಕ್ತರು ಹಾಗೂ ಗಣ್ಯರು ಭಾಗವಹಿಸಿದ್ದರು.

ಏನಿದು ಒಕ್ಕೂಟದ ಧ್ಯೇಯ?

“ಧರ್ಮಗಳ ನಡುವೆ ಸಾಮರಸ್ಯ ಬೆಳೆಸಿ, ಸಮಾಜದಲ್ಲಿ ಶಾಂತಿ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವುದೇ ಸರ್ವಧರ್ಮ ಸಾಧು, ಸಂತ, ಶರಣರ ರಾಜ್ಯ ಒಕ್ಕೂಟದ ಮುಖ್ಯ ಉದ್ದೇಶ.”

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img