ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಅಡ್ನೂರ–ರಾಜೂರ–ಗದಗ ಬೃಹನ್ಮಠದ ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಗಳ ಸ್ಮರಣಾರ್ಥ ಅಣ್ಣಿಗೇರಿಯ ಜ್ಞಾನಗಂಗಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿರುವ ಪ್ರಥಮ ರಾಷ್ಟ್ರೀಯ ಜ್ಞಾನಗಂಗಾ ಪುರಸ್ಕಾರ–2026 ಅನ್ನು ಗದಗದ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಡಾ. ಕಲ್ಲಯ್ಯಜ್ಜನವರಿಗೆ ಪ್ರದಾನ ಮಾಡಲಾಯಿತು.
ವೀರೇಶ್ವರ ಪುಣ್ಯಾಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಳಗಾನೂರು ಹಾಗೂ ಚಿಕ್ಕೇನಕೊಪ್ಪ ಶರಣಾದಿ ಪೂಜ್ಯರು ಕಲ್ಲಯ್ಯಜ್ಜನವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಸಮಾಜಸೇವೆ ಮತ್ತು ಕಲಾ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಕಲ್ಲಯ್ಯಜ್ಜನವರನ್ನು ಪ್ರಥಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಟ್ರಸ್ಟ್ನ ಕಾರ್ಯದರ್ಶಿ ಎಂ.ಎನ್. ಯಲಬುರ್ಗಿ ಬಿನ್ನವತ್ತಳೆ ವಾಚಿಸಿ, ಪ್ರಸ್ತುತ ಪ್ರಶಸ್ತಿಯನ್ನು ₹5 ಸಾವಿರ ನಗದು ಸಹಿತ ಸಾಂಕೇತಿಕವಾಗಿ ಪ್ರದಾನಿಸಲಾಗಿದ್ದು ಮುಂದಿನ ವರ್ಷಗಳಲ್ಲಿ ಪ್ರಶಸ್ತಿಯ ಮೊತ್ತವನ್ನು ಹಂತ ಹಂತವಾಗಿ ₹10 ಲಕ್ಷದವರೆಗೆ ಹೆಚ್ಚಿಸುವ ಉದ್ದೇಶ ಟ್ರಸ್ಟ್ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ಎಂ. ಕಲ್ಲಿನಾಥ ಶಾಸ್ತ್ರಿ, ಖಜಾಂಚಿ ಅರುಣ ಕರಿಶಂಕರಿ, ಉಪಾಧ್ಯಕ್ಷ ಚಂದ್ರಶೇಖರ ಸುರಕೋಡ, ನಿರ್ದೇಶಕರಾದ ವೀರೇಶ ಕಿತ್ತೂರ, ವೀರೇಶ ಶಾನುಭೋಗರ, ಬಿ.ಎಂ. ಕಲ್ಲನಗೌಡರ, ಕಿರಣ ಬೂದಿಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.



