ವಯನಾಡು: ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಸುರಂಗ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುತ್ತಿರುವ ದಿಲೀಪ್ ಬಿಲ್ಡ್ಕಾನ್ ಸಂಸ್ಥೆಗೆ ಕರ್ನಾಟಕದೊಂದಿಗೆ ನಂಟಿದ್ದು, ರಾಜ್ಯದಲ್ಲಿ ಕೈಗೊಂಡಿದ್ದ ಹಲವು ಯೋಜನೆಗಳು ಈ ಹಿಂದೆ ವಿವಾದಕ್ಕೆ ಗುರಿಯಾಗಿದ್ದವು. ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಸ್ಥೆ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಕೆಲ ಯೋಜನೆಗಳಲ್ಲಿ ನಿರ್ಬಂಧವೂ ವಿಧಿಸಲಾಗಿತ್ತು.
ಬೆಂಗಳೂರು–ಮೈಸೂರು ನಡುವಿನ 117 ಕಿಲೋಮೀಟರ್ ಉದ್ದದ ಎಕ್ಸ್ಪ್ರೆಸ್ವೇಯನ್ನು ಸುಮಾರು ₹8,480 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವುದು ಇದೇ ದಿಲೀಪ್ ಬಿಲ್ಡ್ಕಾನ್ ಸಂಸ್ಥೆ. ಇದರ ಜೊತೆಗೆ ಮಂಗಳೂರಿನ ಕೆತ್ತಿಕಲ್ನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನೂ ಸಂಸ್ಥೆ ಕೈಗೊಂಡಿತ್ತು. ಆ ವೇಳೆ ಅವೈಜ್ಞಾನಿಕವಾಗಿ ಮಣ್ಣು ವಿಲೇವಾರಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇ ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಸಂಭವಿಸಿದ ಸರಣಿ ಅಪಘಾತಗಳಲ್ಲಿ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಹೆದ್ದಾರಿ ವಿನ್ಯಾಸದ ದೋಷ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಸಮಸ್ಯೆ ಹಾಗೂ ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯೇ ಅಪಘಾತಗಳಿಗೆ ಕಾರಣ ಎಂಬ ಆರೋಪಗಳು ಆಗ ವ್ಯಕ್ತವಾಗಿದ್ದವು.
ಇದೇ ಯೋಜನೆಗೆ ಸಂಬಂಧಿಸಿದ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಪ್ರಕರಣದಲ್ಲೂ ಕಂಪನಿಯ ಕೆಲವು ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆ ಬೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ಟೆಂಡರ್ ಸಲ್ಲಿಸುವ ಪ್ರಕ್ರಿಯೆಯಿಂದಲೂ ಸಂಸ್ಥೆಯನ್ನು ಹೊರಗಿಡಲಾಗಿತ್ತು.
ಇದೀಗ ವಯನಾಡಿನ ಕಲ್ಲಾಡಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅವಳಿ ಸುರಂಗದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನೊಂದಿಗೆ ಕೊಚ್ಚಿಹೋದ ಟ್ಯಾಂಕರ್ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ.
ಆದರೆ, ಈ ದುರಂತಕ್ಕೆ ತಮ್ಮ ಸಂಸ್ಥೆ ಕಾರಣವಲ್ಲ ಎಂದು ದಿಲೀಪ್ ಬಿಲ್ಡ್ಕಾನ್ ಸ್ಪಷ್ಟನೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ಅಧಿಕಾರಿಗಳು, “ಸುರಂಗದಿಂದ ಹೊರತೆಗೆದ ಮಣ್ಣನ್ನು ಸಂಗ್ರಹಿಸಿರುವ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿಲ್ಲ. ಘಟನೆ ಸುರಂಗ ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಸುಮಾರು 12 ಮೀಟರ್ ದೂರದಲ್ಲಿ ನಡೆದಿದೆ. ನಾವು ವೈಜ್ಞಾನಿಕ ರೀತಿಯಲ್ಲೇ ಮಣ್ಣು ವಿಲೇವಾರಿ ಮಾಡಿದ್ದೇವೆ. ಏಕಾಏಕಿ ಸುರಿದ ಭಾರೀ ಮಳೆಯೇ ಭೂಕುಸಿತಕ್ಕೆ ಕಾರಣ” ಎಂದು ತಿಳಿಸಿದ್ದಾರೆ.



