ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೊಗ್ರಾಫರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ಅವರು ವಿಧಿವಶರಾಗಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 57 ವರ್ಷದ ಸಳಿಯನ್ ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದು, ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಳಿಯನ್ ತಮ್ಮ ಸಿನಿ ಪಯಣವನ್ನು 2007ರಲ್ಲಿ ‘ಕಲ್ಲೂರಿ’ ಚಿತ್ರದ ಮೂಲಕ ಆರಂಭಿಸಿದ್ದರು. ಬಳಿಕ ‘ಪರದೇಸಿ’, ‘ತರೈ ತಪ್ಪಾಟೈ’, ‘ಜೋಕರ್’, ‘ಸವಾರಿ’ ಸೇರಿದಂತೆ ಹಲವು ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ವಿಶಿಷ್ಟ ಗುರುತು ಮೂಡಿಸಿದ್ದರು.
2019ರಲ್ಲಿ ಅವರು ನಿರ್ದೇಶಿಸಿದ ‘ಟು ಲೆಟ್’ ಸಿನಿಮಾ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮೆಚ್ಚುಗೆ ಗಳಿಸಿ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಸಾಮಾನ್ಯ ಕುಟುಂಬದ ಜೀವನ ಹೋರಾಟವನ್ನು ನೈಜವಾಗಿ ತೆರೆದಿಟ್ಟಿದ್ದ ಈ ಸಿನಿಮಾ ಸಳಿಯನ್ ಅವರ ನಿರ್ದೇಶನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.
ಸಳಿಯನ್ ಅವರ ನಿಧನದಿಂದ ತಮಿಳು ಚಿತ್ರರಂಗ ಒಬ್ಬ ಪ್ರತಿಭಾವಂತ ಛಾಯಾಗ್ರಾಹಕ ಹಾಗೂ ಸಂವೇದನಾಶೀಲ ನಿರ್ದೇಶಕನನ್ನು ಕಳೆದುಕೊಂಡಿದೆ. ಇಂದು ಬೆಳಗ್ಗೆಯಿಂದಲೇ ಬಾಲ, ಮಿಸ್ಕಿನ್, ಸಸಿಕುಮಾರ್, ಸೀಮಾನ್ ಸೇರಿದಂತೆ ಅನೇಕ ಗಣ್ಯರು ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.



