ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಿ, ಮದ್ಯದ ದಾಸ್ಯದಿಂದ ಕುಟುಂಬಗಳನ್ನು ರಕ್ಷಿಸುವಂತೆ ಕರ್ನಾಟಕ ಮಾದಿಗ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ಪೂಜಾರ್ ಲೋಕಪ್ಪ ಆಗ್ರಹಿಸಿದರು.
ಪಟ್ಟಣದ ಸಮೀಪದ ಚಿಂತ್ರಪಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಯುವಕರು, ಮಹಿಳೆಯರು ಹಾಗೂ ವೃದ್ಧರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಹೇಳಿದರು.
ಪರಿಶಿಷ್ಟ ಜಾತಿಯ, ವಿಶೇಷವಾಗಿ ಮಾದಿಗ ಸಮುದಾಯದ ಜನರನ್ನು ಅಕ್ರಮ ಮದ್ಯ ಮಾರಾಟದ ಜಾಲದಲ್ಲಿ ಸಿಲುಕಿಸಿ ಪೊಲೀಸ್ ಹಾಗೂ ನ್ಯಾಯಾಲಯದ ಪ್ರಕರಣಗಳಿಗೆ ಗುರಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕು ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಪ್ರವರ್ಗ–1ರ ಮಾದಿಗ ಸಮುದಾಯದ ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಎಫಿಡವಿಟ್ ಕಡ್ಡಾಯಗೊಳಿಸಿರುವುದು ಹಾಗೂ ನಕಲಿ ಜಾತಿ ಪ್ರಮಾಣಪತ್ರಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಅನರ್ಹರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಕರೆ ನೀಡಿದರು.
ಕರ್ನಾಟಕ ಮಾದಿಗ ಮಹಾಸಭೆಯ ಜಿಲ್ಲಾ ಸಂಚಾಲಕ ಮಾದೂರು ಮಹೇಶ್ವರ ಮಾತನಾಡಿ, ಮಾದಿಗ ಸಮುದಾಯದ ಕಾಲೊನಿಗಳಿಗೆ ಮೂಲಸೌಕರ್ಯ ಒದಗಿಸುವುದು ಹಾಗೂ ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಪರಿಶಿಷ್ಟ ಜಾತಿ ಕಾಲೊನಿಗಳ ಅಭಿವೃದ್ಧಿಗೇ ಬಳಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹಿರಿಯ ಸದಸ್ಯ ಹಾಗೂ ನಿವೃತ್ತ ಶಿಕ್ಷಕ ಕಡಲೆಬಾಳ್ ಮಾಯಪ್ಪ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಡಾ. ಬಾಬು ಜಗಜೀವನರಾಂ ಅವರ ವೃತ್ತ ನಿರ್ಮಾಣದ ಬೇಡಿಕೆಯನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದುರುಗಪ್ಪ ಹಾಗೂ ಹೆಚ್. ಪ್ರಕಾಶ್ ಬೆಣ್ಣಿಕಲ್ಲು ಮಾತನಾಡಿ, ಶೀಘ್ರದಲ್ಲೇ ಕರ್ನಾಟಕ ಮಾದಿಗ ಮಹಾಸಭೆ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಖಜಾಂಚಿ ಎ. ಮಹೇಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹರಿಜನ, ಕಾರ್ಯಕಾರಿ ಸಮಿತಿ ಸದಸ್ಯರಾದ ಅರ್ಜುನ್, ಹೆಚ್. ದೊಡ್ಡಬಸಪ್ಪ ದಶಮಾಪುರ, ಮಂಜುನಾಥ ಬ್ಯಾಲಾಳು, ಬಡಗಟ್ಟಿ ಬುಳ್ಳಪ್ಪ, ಹುಲಗತ್ತಿ ಚಿಲುಗೋಡು ಬಸವರಾಜ್, ಪೂಜಾರ್ ಅಂಜಿನಪ್ಪ, ಮೋರಿಗೇರಿ ಗುಳ್ಳಪ್ಪ, ಪೂಜಾರ್ ಮಲ್ಲಪ್ಪ, ಪೂಜಾರ್ ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಿ, ಮದ್ಯದ ದಾಸ್ಯದಿಂದ ಕುಟುಂಬಗಳನ್ನು ರಕ್ಷಿಸಬೇಕು.”
– ಪೂಜಾರ್ ಲೋಕಪ್ಪ, ಅಧ್ಯಕ್ಷ, ಕರ್ನಾಟಕ ಮಾದಿಗ ಮಹಾಸಭೆ ತಾಲೂಕು ಘಟಕ

