ವಿಜಯಸಾಕ್ಷಿ ಸುದ್ದಿ, ಗದಗ: ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ಬದಲು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ರೀತಿಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ೯೨ ಸಸಿಗಳನ್ನು ನೆಡುವ ಮೂಲಕ ತಮ್ಮ ೯೨ನೇ ಜನ್ಮದಿನವನ್ನು ಆಚರಿಸಿಕೊಂಡರು.
ಗದಗ ತಾಲೂಕಿನ ಬಳಗಾನೂರ ರಸ್ತೆಯಲ್ಲಿರುವ ಡಾ. ಪ್ರದೀಪ ಉಗಲಾಟ ಅವರ ‘ಶಿವಶಾಂತ ಜೀವ ವೈವಿಧ್ಯ ಉದ್ಯಾನವನ’ದಲ್ಲಿ ಗದಗ–ಬೆಟಗೇರಿ ರೋಟರಿ ಕ್ಲಬ್, ಇನ್ನರ್ವೀಲ್ ಕ್ಲಬ್ ಹಾಗೂ ರೋಟ್ರಾಕ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವ್ಯಾಪಾರೀಕರಣ ಹಾಗೂ ಔದ್ಯೋಗಿಕರಣದ ಪರಿಣಾಮ ಪರಿಸರ ನಾಶವಾಗುತ್ತಿರುವ ಸಂದರ್ಭದಲ್ಲಿ ಅರಣ್ಯವನ ನಿರ್ಮಾಣದ ಮೂಲಕ ಹಸಿರು ಪರಿಸರ ಬೆಳೆಸುತ್ತಿರುವುದು ಶ್ಲಾಘನೀಯ. ಇಂತಹ ಅರಣ್ಯವನಗಳು ಪ್ರಾಣಿ–ಪಕ್ಷಿಗಳಿಗೆ ಆಶ್ರಯ ತಾಣವಾಗುವುದರ ಜತೆಗೆ ಜೀವವೈವಿಧ್ಯ ಸಂರಕ್ಷಣೆಗೆ ನೆರವಾಗುತ್ತವೆ ಎಂದರು.
ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ ರಡ್ಡೇರ ಮಾತನಾಡಿ, ರಾಜಕೀಯ ಕ್ಷೇತ್ರದ ಹೊರತಾಗಿಯೂ ಎಸ್.ಎಸ್. ಪಾಟೀಲ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಸ್ಯಗಳನ್ನು ನೆಡುವ ಮೂಲಕ ಜನ್ಮದಿನ ಆಚರಿಸಿರುವುದು ಉತ್ತಮ ಸಂದೇಶ ನೀಡಿದೆ ಎಂದರು.
ಡಾ. ಜಿ.ಬಿ. ಪಾಟೀಲ ಮಾತನಾಡಿ, ಬಸವಣ್ಣನವರ ತತ್ವ–ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಎಸ್.ಎಸ್. ಪಾಟೀಲರು ಶರಣ ಬದುಕನ್ನು ಸಾರ್ಥಕಗೊಳಿಸಿದ್ದಾರೆ. ಡಾ. ಪ್ರದೀಪ ಉಗಲಾಟ ಹಾಗೂ ನೀಲಾಂಬಿಕಾ ಉಗಲಾಟ ದಂಪತಿ ಅರಣ್ಯವನ ನಿರ್ಮಿಸುವ ಮೂಲಕ ನಿಸರ್ಗ ಸಂಪತ್ತಿನ ಸಂರಕ್ಷಣೆಗೆ ಮುಂದಾಗಿರುವುದು ಅಭಿನಂದನೀಯ ಎಂದರು.
ಪ್ರೊ. ಸಿದ್ದು ಯಾಪಲಪರ್ವಿ ಮಾತನಾಡಿ, ಇಳಿ ವಯಸ್ಸಿನಲ್ಲಿಯೂ ಎಸ್.ಎಸ್. ಪಾಟೀಲ ಅವರ ಪರಿಸರ ಕಾಳಜಿ ಮಾದರಿಯಾಗಿದೆ. ಜನ್ಮದಿನವನ್ನು ಪರಿಸರದೊಂದಿಗೆ ಆಚರಿಸುವ ಮೂಲಕ ಯುವಜನತೆಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ರೋಟರಿ ಕ್ಲಬ್ ಉಪಾಧ್ಯಕ್ಷ ಸುರೇಶ ಕುಂಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಡುಗಳು ನಾಡಾಗಿ ಪರಿವರ್ತನೆಯಾಗುತ್ತಿರುವುದರಿಂದ ಜೀವವೈವಿಧ್ಯಕ್ಕೆ ಅಪಾರ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯವನ ನಿರ್ಮಾಣದ ಮೂಲಕ ಡಾ. ಪ್ರದೀಪ ಉಗಲಾಟ ಹಾಗೂ ನೀಲಾಂಬಿಕಾ ಉಗಲಾಟ ದಂಪತಿ ಜೀವವೈವಿಧ್ಯಕ್ಕೆ ಆಸರೆಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್. ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ವಿನಯ ಟೀಕಾರೆ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಅಕ್ಷಯ ಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ, ನೀಲಾಂಬಿಕಾ ಉಗಲಾಟ, ಶಿವಾಚಾರ್ಯ ಹೊಸಳ್ಳಿಮಠ, ಮಂಜುಳಾ ಅಕ್ಕಿ, ಸುಲೋಚನಾ ಐಹೋಳಿ, ಸ್ವಾತಿ ಹಿರೇಮಠ, ಚೇತನಾ ಹಂಪಿಮಠ, ಸುಜಾತಾ ಕಾಡಪ್ಪನವರ, ಪ್ರಕಾಶ ಉಗಲಾಟ ಸೇರಿದಂತೆ ರೋಟರಿ ಸದಸ್ಯರು, ಹುಯಿಲಗೋಳ ಗ್ರಾಮಸ್ಥರು ಹಾಗೂ ಉಗಲಾಟ ಕುಟುಂಬದವರು ಉಪಸ್ಥಿತರಿದ್ದರು.
“ಅರಣ್ಯ ಉಳಿದರೆ ಪರಿಸರ ಉಳಿಯುತ್ತದೆ, ಪರಿಸರ ಉಳಿದರೆ ಮಾನವನ ಬದುಕು ಸುರಕ್ಷಿತವಾಗಿರುತ್ತದೆ. ಅರಣ್ಯ ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಭೂಮಿಯ ಜೀವಜಲದ ಆಧಾರವಾಗಿದೆ. ಕಪ್ಪತಗುಡ್ಡ ಔಷಧೀಯ ಸಸ್ಯಗಳ ಆಗರವಾಗಿದ್ದು, ಡಾ. ಪ್ರದೀಪ ಉಗಲಾಟ ಅವರ ಸತತ ಪರಿಶ್ರಮದಿಂದ ನಿರ್ಮಾಣವಾಗುತ್ತಿರುವ ಈ ಅರಣ್ಯವನ ಮಾದರಿಯಾಗಿದೆ.”
— ಎಸ್.ಎಸ್. ಪಾಟೀಲ



