ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಕ್ತದಾನ ಶಿಬಿರಗಳು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಜೀವದಾನ ನೀಡುವ ಅತ್ಯಂತ ಮಾನವೀಯ ಹಾಗೂ ಪವಿತ್ರ ಸಾಮಾಜಿಕ ಕಾರ್ಯಗಳಾಗಿವೆ ಎಂದು ನ್ಯಾಯವಾದಿ ವಿದ್ಯಾಧರ ಶಿರಗುಂಪಿ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯಲಿರುವ ಮಧ್ಯರಾತ್ರಿ ಧ್ವಜಾರೋಹಣ ಕಾರ್ಯಕ್ರಮದ ಪ್ರಯುಕ್ತ, ಗದುಗಿನ ಬಸವೇಶ್ವರ ರಕ್ತ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಯುವ ಮುಖಂಡ ಅನಿಲ್ ತಳವಾರ ಮಾತನಾಡಿ, ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಹಾಗೂ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತ ಸಂಜೀವಿನಿಯಾಗಿದೆ. ‘ರಕ್ತದಾನವೇ ಮಹಾದಾನ’ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವಲ್ಲಿ ಇಂತಹ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಶಿಬಿರದಲ್ಲಿ ೩೬ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಗದುಗಿನ ಬಸವೇಶ್ವರ ರಕ್ತ ಕೇಂದ್ರದ ಆಡಳಿತಾಧಿಕಾರಿ ಅನಿಲಕುಮಾರ ಹಂದ್ರಾಳ, ಸಮಾಲೋಚಕ ಸುಭಾಷ್ ಶಾಲವಾಡ ಹಾಗೂ ತಂತ್ರಜ್ಞರಾದ ಸರೋಜಾ ಪತ್ತಾರ, ಆಕಾಶ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅನಿಲ್ ಕಿಟಗೇರಿ, ನಾಗರಾಜ ಕಡಗದ, ಶಿವಕುಮಾರ್ ಸ್ಟಾಂಪಿನ್, ಮಂಜುನಾಥ ವಾಲಿ, ಆನಂದ ಕೊಪ್ಪದ, ವಿಶ್ವನಾಥ ಬುಳ್ಳಾ, ಅಂದಾನಪ್ಪ ಬಳಿಗೇರ, ಮುತ್ತು ಮೇಟಿ, ಮಹಾಂತೇಶ ಇಟಗಿ, ಪ್ರವೀಣ್ ಕೊಪ್ಪದ, ಅಮರ ಬುಳ್ಳಾ, ರವಿಕಿರಣ್ ಕಮ್ಮಾರ, ಸಂಗಮೇಶ ಪರಡ್ಡಿ, ಸೂರಜ್ ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೂ ಮುನ್ನ ರಕ್ತದಾನ ಮಾಡುವ ಮೂಲಕ ಜಕ್ಕಲಿ ಯುವಕರು ಮಾನವೀಯತೆಯ ಸಂದೇಶ ಸಾರಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
“ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಹಲವಾರು ಜೀವಗಳನ್ನು ಉಳಿಸುವ ಪುಣ್ಯದ ಅವಕಾಶ ದೊರೆಯುತ್ತದೆ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೂ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ರಕ್ತದಾನದ ಮಹತ್ವ ಅರಿತು ಇಂತಹ ಮಾನವೀಯ ಕಾರ್ಯಗಳಲ್ಲಿ ಕೈಜೋಡಿಸಬೇಕು.”
— ವಿದ್ಯಾಧರ ಶಿರಗುಂಪಿ, ನ್ಯಾಯವಾದಿ

