ವಿಜಯಸಾಕ್ಷಿ ಸುದ್ದಿ, ಗದಗ: ಪ್ರಾಮಾಣಿಕತೆ, ಸ್ವಾವಲಂಬನೆ ಹಾಗೂ ನಿರಂತರ ಪರಿಶ್ರಮವೇ ಉದ್ಯಮದ ಯಶಸ್ಸಿನ ಮೂಲಮಂತ್ರ. ವ್ಯಾಪಾರಸ್ಥರು ಯಾವುದೇ ಸಮಸ್ಯೆ ಎದುರಾದರೂ ಧೈರ್ಯದಿಂದ ಹೋರಾಡಬೇಕು. ಅವರ ಬೆನ್ನಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸದಾ ನಿಲ್ಲಲಿದೆ ಎಂದು ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಭಾನುವಾರ ನಡೆದ ‘ಗದಗ ಉತ್ಸವ–2026’ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯಮಿಗಳಿಗೆ ಸರ್ಕಾರದ ಆರ್ಥಿಕ ನೆರವು ಮತ್ತಷ್ಟು ಹೆಚ್ಚಾಗಬೇಕು. ಪ್ರಸ್ತುತ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುವುದರ ಜತೆಗೆ, ರೈತರಿಗೆ ನೀಡುವ ಮಾದರಿಯಲ್ಲಿ ಉದ್ಯಮಿಗಳಿಗೂ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸಬೇಕು. ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಿ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
“ಸಬ್ಸಿಡಿಗಾಗಿ ಕಾಯುವುದಕ್ಕಿಂತ ಸ್ವಾವಲಂಬಿಯಾಗಿ ದುಡಿಯುವುದು ಮುಖ್ಯ. ಪ್ರಾಮಾಣಿಕವಾಗಿ ದುಡಿಯುವವರನ್ನು ಸಂಸ್ಥೆ ಸದಾ ಬೆಂಬಲಿಸುತ್ತದೆ.” ಎಂದು ಗುಡಿಮನಿ ಹೇಳಿದರು.
ಸರ್ಕಾರ ತೆರಿಗೆ ಸಂಗ್ರಹಿಸುವ ತನ್ನ ಕರ್ತವ್ಯ ನಿರ್ವಹಿಸಲಿ. ಆದರೆ ಸಣ್ಣಪುಟ್ಟ ಕಾರಣಗಳಿಗೆ ಉದ್ಯಮಿಗಳಿಗೆ ಅನಗತ್ಯ ತೊಂದರೆ ನೀಡಬಾರದು. ಒಂದು ಉದ್ಯಮಕ್ಕೆ ಧಕ್ಕೆಯಾದರೆ ಅದರೊಂದಿಗೆ ನೂರಾರು ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.
ಆರ್ಥಿಕ ಸಂಕಷ್ಟ ಹಾಗೂ ಸಾಲದ ಒತ್ತಡದ ನಡುವೆಯೂ ಛಲ ಬಿಡದೆ ಪ್ರಾಮಾಣಿಕವಾಗಿ ದುಡಿದು ಯಶಸ್ಸು ಸಾಧಿಸಿರುವ ಗಜೇಂದ್ರಗಡದ ಉದ್ಯಮಿಗಳ ಸಾಧನೆ ಇತರರಿಗೆ ಮಾದರಿಯಾಗಿದೆ. ನಿರಂತರ ಪರಿಶ್ರಮದಿಂದ ಸಂಕಷ್ಟದ ದಿನಗಳನ್ನು ಮೀರಿ ಯಶಸ್ಸು ಗಳಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಿಗಳ ನೋಟಿಸ್ಗೆ ಹೆದರಿ ಉದ್ಯಮಿಗಳು ಆತಂಕಕ್ಕೊಳಗಾಗಬಾರದು. ಕಾನೂನುಬದ್ಧವಾಗಿ ಉತ್ತರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವ್ಯಾಪಾರಸ್ಥರ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡಲು ಸಂಸ್ಥೆಯಲ್ಲಿ ಅನುಭವಿ ವಕೀಲರು ಹಾಗೂ ವಿಷಯ ತಜ್ಞರು ಲಭ್ಯವಿದ್ದು, ಯಾವುದೇ ತೊಂದರೆ ಎದುರಾದರೂ ಸಂಸ್ಥೆಯನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಗದಗ ಉತ್ಸವದ ಅಂಗವಾಗಿ ನಡೆದ 140 ಮಳಿಗೆಗಳ ಪ್ರದರ್ಶನ ಯಶಸ್ವಿಯಾಗಿದ್ದು, ಸಣ್ಣ ಗುಡಿ ಕೈಗಾರಿಕೆಗಳಿಂದ ಉತ್ಪನ್ನ ತಯಾರಿಸಿ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿರುವ ಉದ್ಯಮಿಗಳ ಸಾಧನೆ ಹೆಮ್ಮೆಯ ಸಂಗತಿ ಎಂದರು.
ಉತ್ಸವದ ಆಯೋಜನೆಗೆ ಸರ್ಕಾರದ ನೆರವು ಮಾತ್ರ ಸಾಕಾಗುವುದಿಲ್ಲ. ಸುಮಾರು ₹50 ಲಕ್ಷ ವೆಚ್ಚವನ್ನು ವ್ಯಾಪಾರಸ್ಥರು ತಮ್ಮ ಲಾಭದ ಹಣದಿಂದಲೇ ಭರಿಸುತ್ತಿದ್ದಾರೆ. ಉದ್ಯಮಿಗಳು ತಮ್ಮ ಕಾರ್ಮಿಕರ ಕುಟುಂಬಗಳ ಮದುವೆ, ವೈದ್ಯಕೀಯ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ನೆರವಾಗುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ಉತ್ಸವದ ಯಶಸ್ಸಿಗೆ ಸಹಕರಿಸಿದ ಚೇಂಬರ್ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರಿಗೆ ಗುಡಿಮನಿ ಕೃತಜ್ಞತೆ ಸಲ್ಲಿಸಿದರು.
“ಅಧಿಕಾರಿಗಳ ನೋಟಿಸ್ಗೆ ಹೆದರಿ ಉದ್ಯಮಿಗಳು ಆತಂಕಕ್ಕೊಳಗಾಗಬಾರದು. ಕಾನೂನುಬದ್ಧವಾಗಿ ಉತ್ತರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವ್ಯಾಪಾರಸ್ಥರ ಯಾವುದೇ ಸಮಸ್ಯೆಗೆ ಸಂಸ್ಥೆ ಅವರ ಬೆನ್ನಿಗೆ ನಿಲ್ಲಲಿದೆ.” ಎಂದು ಶರಣಬಸಪ್ಪ ಗುಡಿಮನಿ ಹೇಳಿದರು.
— ಶರಣಬಸಪ್ಪ ಗುಡಿಮನಿ, ಅಧ್ಯಕ್ಷರು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ



