ವಿಜಯಸಾಕ್ಷಿ ಸುದ್ದಿ, ಗದಗ: ಜಾನಪದ ಕಲೆ, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಆಟಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆ.22ರಂದು ನಗರದ ಎ.ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ‘ಪಂಚಮ ಪಗಡಂ’ ಜಾನಪದ ಆಟ–ನೃತ್ಯಗಳ ಸಂಭ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕರಣ್ಣ ಸಂಕಣ್ಣನವರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜಾನಪದ ಪರಂಪರೆ ಹಾಗೂ ಮೂಲ ಜನಪದ ಆಟಗಳನ್ನು ಉಳಿಸಿ ಬೆಳೆಸುವ ಆಶಯದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಇಡಲಕಿ, ಕುಂಟಬಿಲ್ಲೆ, ಬಗರಿ, ಲಗೋರಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಿಂದೆ ಜನಪ್ರಿಯವಾಗಿದ್ದ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗುವುದು. ಅಗತ್ಯ ಪರಿಕರಗಳನ್ನು ಸಿದ್ಧಪಡಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧ್ಯಾಪಕರ ಸಂಘದ ಸಹಕಾರ ಪಡೆಯಲಾಗಿದೆ ಎಂದರು.
ವಿವಿಧ ಜಿಲ್ಲೆಗಳ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ತಂಜಾವೂರು ಸೌತ್ಜೋನ್ ಸಿದ್ಧಿಕುಣಿತ, ನಂದಿಧ್ವಜ, ಪುರವಂತಿಕೆ, ಹಗಲು ವೇಷ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ.
ಸುದ್ದಿಗೋಷ್ಠಿಯಲ್ಲಿ ಡಾ. ಜಿ.ಬಿ. ಪಾಟೀಲ, ಮೌನೇಶ ಬಡಿಗೇರ, ಗೌಡಪ್ಪ ಬೊಮ್ಮಪ್ಪನವರ, ಶಿವು ಭಜಂತ್ರಿ, ಸೋಮು ಚಿಕ್ಕಮಠ ಉಪಸ್ಥಿತರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಲಿದ್ದಾರೆ.
“ಜಾನಪದ ಆಟಗಳು ಕೇವಲ ಮನರಂಜನೆಯಲ್ಲ. ಮಕ್ಕಳ ದೈಹಿಕ ಚಟುವಟಿಕೆ, ಚಿಂತನಾ ಸಾಮರ್ಥ್ಯ ಹಾಗೂ ಮೆದುಳಿನ ಬೆಳವಣಿಗೆಗೂ ಇವು ಸಹಕಾರಿಯಾಗುತ್ತವೆ. ಇಂತಹ ಆಟಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ.”
— ಶಂಕರಣ್ಣ ಸಂಕಣ್ಣನವರ, ಸದಸ್ಯ, ಕರ್ನಾಟಕ ಜಾನಪದ ಅಕಾಡೆಮಿ



