ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕುಮಾರವ್ಯಾಸ ವ್ಯಾಪಾರ ಮಳಿಗೆ ಸಂಕೀರ್ಣದಲ್ಲಿ ಗುರುವಾರ ನೂತನ ಅಂಚೆ ಗ್ರಾಹಕ ಸೇವಾ ಕೇಂದ್ರಕ್ಕೆ ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ತ್ವರಿತ, ವಿಶ್ವಾಸಾರ್ಹ ಹಾಗೂ ಸುಲಭ ಅಂಚೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನೂತನ ಸೇವಾ ಕೇಂದ್ರ ಆರಂಭಿಸಲಾಗಿದೆ. ಇದರಿಂದ ನಗರದ ಜನರಿಗೆ ಅಗತ್ಯ ಅಂಚೆ ಸೇವೆಗಳು ಇನ್ನಷ್ಟು ವೇಗವಾಗಿ ಹಾಗೂ ಸುಲಭವಾಗಿ ಲಭ್ಯವಾಗಲಿವೆ ಎಂದರು.
ಗ್ರಾಹಕರ ಅನುಕೂಲಕ್ಕಾಗಿ ಗದಗ ನಗರದ ಹೃದಯ ಭಾಗದಲ್ಲಿ ನೂತನ ಅಂಚೆ ಫ್ರಾಂಚೈಸಿ ಹಾಗೂ ಗ್ರಾಹಕ ಸೇವಾ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಇಲಾಖೆ ಇಂದು ಕೇವಲ ಪತ್ರಗಳನ್ನು ತಲುಪಿಸುವ ಸಂಸ್ಥೆಯಾಗಿರದೆ, ಜನರ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಸೇವಾ ಸಂಸ್ಥೆಯಾಗಿ ರೂಪಾಂತರಗೊಂಡಿದೆ ಎಂದು ಎಸ್.ಎಸ್. ಶಿರಹಟ್ಟಿ ಹೇಳಿದರು.
ತಂತ್ರಜ್ಞಾನ ಹಾಗೂ ನೂತನ ಸೇವಾ ಕೇಂದ್ರಗಳ ಮೂಲಕ ಅಂಚೆ ಸೇವೆಗಳು ಜನರ ಮನೆ ಬಾಗಿಲಿಗೆ ಇನ್ನಷ್ಟು ಹತ್ತಿರವಾಗುತ್ತಿವೆ. ನಗರದ ನಾಗರಿಕರು ಈ ಕೇಂದ್ರದ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಧಾನ ಅಂಚೆ ಪಾಲಕ ಲಕ್ಷ್ಮಣ ಅಸುಂಡಿ, ಅಂಚೆ ಸಹಾಯಕರಾದ ಎಂ.ಟಿ. ಕರಿಗಾರ, ಮಧು ಶಿರೂರ, ವೆಂಕಟೇಶ ಆಕಳವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



