HomeGadag Newsಭಾವಗಳು ಅರಳಿದಾಗಲೇ ಜಗತ್ತಿನಲ್ಲಿ ಶಾಂತಿ ಸಾಧ್ಯ: ತೋಂಟದ ಸಿದ್ಧರಾಮ ಶ್ರೀ

ಭಾವಗಳು ಅರಳಿದಾಗಲೇ ಜಗತ್ತಿನಲ್ಲಿ ಶಾಂತಿ ಸಾಧ್ಯ: ತೋಂಟದ ಸಿದ್ಧರಾಮ ಶ್ರೀ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ. ಈ ಬಹುತ್ವವೇ ಭಾರತದ ಅಸ್ಮಿತೆಯಾಗಿದೆ ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2812ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ. ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿ ಅವರು ರಚಿಸಿರುವ ‘ಭಾವೈಕ್ಯತೆಯ ಬೆಳಕು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ನಿವೃತ್ತ ಶಿಕ್ಷಕ ಚೆನ್ನಯ್ಯ ತೋಟಯ್ಯ ಹಿರೇಮಠ ಹಾಗೂ ನಿವೃತ್ತ ಶಿಕ್ಷಕ ಎಸ್.ಎಂ. ವಾಲಿ ಅವರನ್ನು ಗೌರವಿಸಿ ಆಶೀರ್ವದಿಸಲಾಯಿತು.

ಜಗತ್ತಿನ ಹಲವು ಭಾಗಗಳಲ್ಲಿ ಇಂದು ಯುದ್ಧಗಳು ನಡೆಯುತ್ತಿದ್ದು, ಜನರು ಭಯಗ್ರಸ್ತ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರೀತಿ ನೆಲೆಸಬೇಕಾದರೆ ಮನುಷ್ಯರ ನಡುವೆ ಭಾವನೆಗಳು ಅರಳಬೇಕು. ಪರಸ್ಪರ ಪ್ರೀತಿ, ದಯೆ ಮತ್ತು ಭ್ರಾತೃತ್ವದ ಭಾವನೆ ಬೆಳೆಸುವ ಅಗತ್ಯವಿದೆ ಎಂದರು.

ವಿವಿಧ ಕಾಲಘಟ್ಟಗಳಲ್ಲಿ ಸಮಾಜದ ಒಳಿತಿಗಾಗಿ ಅನೇಕ ಪ್ರವಾದಿಗಳು, ಸಮಾಜ ಸುಧಾರಕರು ಹಾಗೂ ಹೋರಾಟಗಾರರು ಜನ್ಮತಳೆದಿದ್ದಾರೆ. ಅವರು ತಮ್ಮ ಜೀವನದ ಮೂಲಕ ಇಡೀ ಮನುಕುಲದ ಬಗ್ಗೆ ಪ್ರೀತಿ ಮತ್ತು ದಯೆ ಬೆಳೆಸುವ ಸಂದೇಶ ನೀಡಿದ್ದಾರೆ. ಮುಹಮ್ಮದ್ ಪೈಗಂಬರ್, ಜಗಜ್ಯೋತಿ ಬಸವೇಶ್ವರ, ಬುದ್ಧ, ಮಹಾವೀರ ಸೇರಿದಂತೆ ಮಹನೀಯರ ಆದರ್ಶ ಮತ್ತು ಮೌಲ್ಯಗಳನ್ನು ಇಂದಿನ ಸಮಾಜ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ಮಾನವೀಯ ಮೌಲ್ಯಗಳನ್ನು ‘ಭಾವೈಕ್ಯತೆಯ ಬೆಳಕು’ ಕೃತಿ ಒಳಗೊಂಡಿದೆ ಎಂದು ಹೇಳಿದರು.

ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಹಿರಿಯರನ್ನು ಗೌರವಿಸಿ ಮಾತನಾಡಿದ ಅವರು, ಕಣ್ಣಿಗೆ ಕಾಣದ ದೇವರಿಗಿಂತ ಕಣ್ಣಿಗೆ ಕಾಣುವ ತಂದೆ-ತಾಯಿ, ಹಿರಿಯರು ಹಾಗೂ ಗುರುಗಳನ್ನು ಗೌರವಿಸುವ ಸಮಾಜವೇ ಸುಸಂಸ್ಕೃತ ಸಮಾಜ. ಹೊಸ ತಲೆಮಾರು ಹಿರಿಯರನ್ನು ಗೌರವಿಸುವ ಹಾಗೂ ಅವರ ಅನುಭವಗಳನ್ನು ಅನುಸರಿಸುವ ಗುಣ ಬೆಳೆಸಿಕೊಳ್ಳಬೇಕು. ಹಳೆ ಬೇರು, ಹೊಸ ಚಿಗುರು ಇದ್ದಾಗಲೇ ಮರ ಸೊಬಗಾಗಿರುವಂತೆ, ಮನೆಯಲ್ಲಿ ಹಿರಿಯರು ಇದ್ದಾಗ ಕುಟುಂಬಕ್ಕೆ ಶೋಭೆ ಬರುತ್ತದೆ ಎಂದರು.

ಕೃತಿ ಪರಿಚಯ ಮಾಡಿದ ಗದಗ ಜಮಾತ್-ಎ-ಇಸ್ಲಾಂ ಅಧ್ಯಕ್ಷ ಎ.ಐ. ಶೇಖ ಮಾತನಾಡಿ, ‘ಭಾವೈಕ್ಯತೆಯ ಬೆಳಕು’ ಎಲ್ಲರನ್ನು ಒಂದುಗೂಡಿಸುವ ಹಾಗೂ ಏಕತೆಯನ್ನು ಸಾಧಿಸುವ ಅಪರೂಪದ ಕೃತಿಯಾಗಿದೆ. ಲೇಖಕ ಡಾ. ಸಮುದ್ರಿ ಅವರು ಭಾರತದ ಬಹುತ್ವವನ್ನು ಎತ್ತಿಹಿಡಿದಿರುವುದರ ಜೊತೆಗೆ, ಮೊದಲು ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಪ್ರತಿಪಾದಿಸಿದ್ದಾರೆ. ಕೃತಿಯನ್ನು ಯುವಕರಿಗೆ ಅರ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕೃತಿಯ ಲೇಖಕ ಡಾ. ಎಂ.ಡಿ. ಸಮುದ್ರಿ ಮಾತನಾಡಿ, ಕೃತಿ ರಚನೆಗೆ ತಂದೆ-ತಾಯಿ, ಕುಟುಂಬ, ಗುರುಗಳು ಸೇರಿದಂತೆ ಅನೇಕರು ನೀಡಿದ ಸಹಾಯ-ಸಹಕಾರವನ್ನು ಸ್ಮರಿಸಿ, ಅವರಿಗೆ ಚಿರಋಣಿಯಾಗಿರುವುದಾಗಿ ಹೇಳಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಕುಮಾರಿ ಸ್ಫೂರ್ತಿ ಸೈದಾಪುರ ಹಾಗೂ ವಚನ ಚಿಂತನವನ್ನು ಪುಷ್ಪಾವತಿ ಮನೋಹರ ಮಾಲಿಪಾಟೀಲ ನೆರವೇರಿಸಿದರು. ದಾಸೋಹ ಸೇವೆಯನ್ನು ವಿವಿಧ ಕುಟುಂಬಗಳ ವತಿಯಿಂದ ಕೈಗೊಳ್ಳಲಾಯಿತು.

ಶರಣೆ ಗಿರಿಜಕ್ಕ ಧರ್ಮರಡ್ಡಿ ಅವರು ‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯದ ಕುರಿತು ಪ್ರವಚನ ನೀಡಿದರು. ಹಿರಿಯರಾದ ಡಾ. ಜಿ.ಬಿ. ಪಾಟೀಲ, ಶಿವನಗೌಡ ಗೌಡರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ವೀ. ಪುರದ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರ್ಮನ್ ಡಾ. ರಮೇಶ ಮ. ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು.

ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರೀತಿ ಮೂಡಬೇಕಾದರೆ ಮನುಷ್ಯರ ಮಧ್ಯೆ ಭಾವಗಳು ಅರಳಬೇಕು. ಮುಹಮ್ಮದ್ ಪೈಗಂಬರ್, ಬಸವೇಶ್ವರ, ಬುದ್ಧ, ಮಹಾವೀರ ಸೇರಿದಂತೆ ಮಹನೀಯರ ಮಾನವೀಯ ಆದರ್ಶ ಮತ್ತು ಮೌಲ್ಯಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ.

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img