ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯಜ್ಞೋಪವೀತ ಧಾರಣ ಸಂಸ್ಕಾರವು ಪರಮ ಪವಿತ್ರವಾಗಿದ್ದು, ಧಾರ್ಮಿಕ ಮಹತ್ವದ ಜತೆಗೆ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿದೆ. ಇದು ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ದೃಢವಾಗಲು ಸಹಕಾರಿಯಾಗಿದೆ ಎಂದು ಯುವ ಧಾರ್ಮಿಕ ಚಿಂತಕ ಪ್ರಜ್ವಲ್ ಜೋಶಿ ಹೇಳಿದರು.
ಪಟ್ಟಣದ ಶಂಕರಭಾರತಿಮಠದಲ್ಲಿ ಮಂಗಳವಾರ ಹಸ್ತಾಯುಕ್ತ ಷಷ್ಠಿ ತಿಥಿಯಂದು ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಿದ್ದ ಯಜ್ಞೋಪವೀತ ಧಾರಣಾ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದ 16 ಪ್ರಮುಖ ಸಂಸ್ಕಾರಗಳಲ್ಲಿ ಉಪನಯನ ಅಥವಾ ಯಜ್ಞೋಪವೀತ ಧಾರಣೆಯೂ ಒಂದಾಗಿದೆ. ವೇದಾಧ್ಯಯನ, ಗಾಯತ್ರಿ ಮಂತ್ರ ಜಪ ಹಾಗೂ ಧಾರ್ಮಿಕ ಅನುಷ್ಠಾನಗಳಿಗೆ ದೀಕ್ಷೆ ನೀಡುವ ಸಂಕೇತವಾಗಿ ಯಜ್ಞೋಪವೀತವನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್ ಮಾತನಾಡಿ, ವೇದ, ಪುರಾಣ ಹಾಗೂ ಪೂಜೆ-ಪುನಸ್ಕಾರಗಳ ಹಿಂದೆ ಧಾರ್ಮಿಕತೆಯ ಜತೆಗೆ ವೈಜ್ಞಾನಿಕ ಅಂಶಗಳೂ ಅಡಗಿವೆ. ಬ್ರಾಹ್ಮಣರು ನಿತ್ಯ ಗಾಯತ್ರಿ ಮಂತ್ರ ಜಪಿಸುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನೂರಾರು ವಿಪ್ರಬಾಂಧವರು ಋಷಿ ಹೋಮ ಹಾಗೂ ಉಪಾಕರ್ಮ ಹೋಮ ನೆರವೇರಿಸಿದರು. ಬಳಿಕ ‘ಯಜ್ಞೋಪವೀತಂ ಪರಮಂ ಪವಿತ್ರಂ’ ಮಂತ್ರ ಪಠಣದೊಂದಿಗೆ ಹೊಸ ಯಜ್ಞೋಪವೀತ ಧರಿಸಿ, ಹಳೆಯ ಯಜ್ಞೋಪವೀತವನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಿದರು.
ಕಾರ್ಯದರ್ಶಿ ಅರವಿಂದ ದೇಶಪಾಂಡೆ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ವಿಪ್ರಬಾಂಧವರು ಪಾಲ್ಗೊಂಡಿದ್ದರು.
ಯಜ್ಞೋಪವೀತ ಧಾರಣೆಯು ಕೇವಲ ಧಾರ್ಮಿಕ ಆಚರಣೆಯಲ್ಲ. ಜ್ಞಾನ, ಶಿಸ್ತು ಮತ್ತು ಆಧ್ಯಾತ್ಮಿಕ ಸಾಧನೆಯತ್ತ ವ್ಯಕ್ತಿಯನ್ನು ಮುನ್ನಡೆಸುವ ಮಹತ್ವದ ಸಂಸ್ಕಾರವಾಗಿದೆ.
— ಪ್ರಜ್ವಲ್ ಜೋಶಿ, ಯುವ ಧಾರ್ಮಿಕ ಚಿಂತಕ



