ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ನಂದೀಶ್ವರ ನಗರದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮಾದರಿ ಉದ್ಯಾನವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಗರದ ಶೋಭೆ ಹೆಚ್ಚಿಸುವ ಜತೆಗೆ ಬಡಾವಣೆಯ ನಾಗರಿಕರಿಗೆ ಉತ್ತಮ ವಾತಾವರಣ ಕಲ್ಪಿಸಲಿದೆ ಎಂದು ಯುವ ಮುಖಂಡ ಕೆ.ಎಚ್. ಪಾಟೀಲ ಹೇಳಿದರು.
ಕಳಸಾಪೂರ ರಸ್ತೆಯ ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಹಕಾರಿ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಪಂಚವಟಿ ನಾಗದೇವತಾ ರುದ್ರಾಭಿಷೇಕ, ಪಂಚವಟಿ ನಾಗರಕಟ್ಟೆ ಉದ್ಯಾನವನದ ಕಾಂಪೌಂಡ್ ಹಾಗೂ ಹೈಮಾಸ್ಟ್ ಉದ್ಘಾಟನೆ, ವನಮಹೋತ್ಸವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡಾವಣೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ಸಾಬ ಬಬರ್ಚಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ನಗರಸಭೆ ಸದಸ್ಯ ಅನಿಲ ಗರಗ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಿ.ಎಸ್. ಹಿರೇಮಠ ಉಪಸ್ಥಿತರಿದ್ದರು.
ಈ ವೇಳೆ ಪಂಚವಟಿ ನಾಗದೇವತಾ ರುದ್ರಾಭಿಷೇಕ ನೆರವೇರಿಸಿ, ಉದ್ಯಾನವನದ ಕಾಂಪೌಂಡ್ ಹಾಗೂ ಹೈಮಾಸ್ಟ್ ಉದ್ಘಾಟಿಸಲಾಯಿತು. ವನಮಹೋತ್ಸವದ ಅಂಗವಾಗಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ನಂದೀಶ್ವರ ನಗರದಲ್ಲಿ ನಿರ್ಮಾಣವಾಗುತ್ತಿರುವ ಮಾದರಿ ಉದ್ಯಾನವನ ಬಡಾವಣೆಯ ಅಭಿವೃದ್ಧಿಗೆ ಹೊಸ ಮೆರುಗು ನೀಡಲಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ.
— ಕೆ.ಎಚ್. ಪಾಟೀಲ, ಯುವ ಮುಖಂಡ



