ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಹೇಗ್ನ ಅಂತರರಾಷ್ಟ್ರೀಯ ನ್ಯಾಯಾಲಯದ ಪ್ರಮುಖ ನ್ಯಾಯಾಧೀಶ ಲಿಯೋನಾರ್ಡೋ ಬ್ರಾಂಟ್ ಅವರು ಶನಿವಾರ ವಿಧಾನಸೌಧಕ್ಕೆ ಭೇಟಿ ನೀಡಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರನ್ನು ಭೇಟಿಯಾದರು.
ವಿಧಾನಸೌಧದಲ್ಲಿರುವ ತಮ್ಮ ಅಧಿಕೃತ ಕಚೇರಿಯಲ್ಲಿ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರು ನ್ಯಾಯಾಧೀಶ ಲಿಯೋನಾರ್ಡೋ ಬ್ರಾಂಟ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ಗಣ್ಯರ ನಡುವೆ ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಿತು.
ಜಾಗತಿಕ ಮಟ್ಟದ ಕಾನೂನು ವ್ಯವಸ್ಥೆ, ನ್ಯಾಯ ವಿತರಣೆ ಹಾಗೂ ಅಂತರರಾಷ್ಟ್ರೀಯ ನ್ಯಾಯಾಲಯದ ಕಾರ್ಯವೈಖರಿ ಕುರಿತು ಲಿಯೋನಾರ್ಡೋ ಬ್ರಾಂಟ್ ಮಾಹಿತಿ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕರ್ನಾಟಕ ಶಾಸನಸಭೆಯ ಪರಂಪರೆ, ಶಾಸನ ರಚನೆ ಪ್ರಕ್ರಿಯೆ ಹಾಗೂ ಪ್ರಜಾಸತ್ತಾತ್ಮಕ ಕಾರ್ಯಕಲಾಪಗಳ ಕುರಿತು ಸಭಾಧ್ಯಕ್ಷ ಜಿ.ಎಸ್. ಪಾಟೀಲ ವಿವರಿಸಿದರು.
ಬಳಿಕ ಸಭಾಧ್ಯಕ್ಷರು ಲಿಯೋನಾರ್ಡೋ ಬ್ರಾಂಟ್ ಅವರಿಗೆ ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು.



