ಮೈಸೂರು: ಮೈಸೂರು ದಸರಾ ಜಂಬೂಸವಾರಿಯಲ್ಲಿ ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜಪಡೆ ನಾಯಕ ಅಭಿಮನ್ಯು ಇದೀಗ ಮತ್ತೆ ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾನೆ. 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ನಿವೃತ್ತಿ ನೀಡಲಾಗಿತ್ತು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ 2026ರ ದಸರಾ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಭಾಗವಹಿಸಲು ಸರ್ಕಾರ ಅವಕಾಶ ನೀಡಿದೆ.
ಅಭಿಮನ್ಯು ಹಲವು ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದಾನೆ. ಅಂಬಾರಿ ಹೊರುವ ಜವಾಬ್ದಾರಿಯನ್ನು ಶಿಸ್ತು ಹಾಗೂ ಧೈರ್ಯದಿಂದ ನಿರ್ವಹಿಸಿ, ನಾಡಿನ ಜನರ ಅಪಾರ ಪ್ರೀತಿ ಮತ್ತು ಗೌರವ ಗಳಿಸಿದ್ದಾನೆ.
ನಿವೃತ್ತಿ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಇತ್ತೀಚೆಗೆ ಗೌರವ ಹಾಗೂ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಆದರೆ ಅಭಿಮಾನಿಗಳು ಅಭಿಮನ್ಯುವನ್ನು ದಸರಾ-2026ರ ಜಂಬೂಸವಾರಿಗೆ ಕೊನೆಯ ಬಾರಿಗೆ ಕರೆತಂದು ನಿಶಾನೆ ಆನೆಯಾಗಿ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು.
ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, 2026ರ ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯುವನ್ನು ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಭಾಗವಹಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಅಭಿಮನ್ಯುವನ್ನು ಮತ್ತೊಮ್ಮೆ ದಸರಾ ಮೆರವಣಿಗೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ಹಲವು ವರ್ಷಗಳ ಅಮೂಲ್ಯ ಸೇವೆಯ ಬಳಿಕ ಅಭಿಮನ್ಯುವಿಗೆ ಅದ್ದೂರಿ ಗೌರವದೊಂದಿಗೆ ಬೀಳ್ಕೊಡುಗೆ ನೀಡಬೇಕೆಂಬ ಅಭಿಮಾನಿಗಳ ಆಸೆಯೂ ಇದೀಗ ಈಡೇರಲಿದೆ.



