ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಬರಹದಂತೆ ಬದುಕುವ ಸಾಹಿತಿಗಳು ಮಾತ್ರ ಸಮಾಜಕ್ಕೆ ಪರಿಣಾಮಕಾರಿ ಸಂದೇಶ ನೀಡಲು ಸಾಧ್ಯ. ನಡೆ–ನುಡಿಗಳಲ್ಲಿನ ಏಕತೆಯಿಂದ ಸಮಾಜದಲ್ಲಿ ಮನ್ನಣೆ ಗಳಿಸಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ನೀಲಕಂಠ ಮರಡಿ ಹೇಳಿದರು.
ಪಟ್ಟಣದ ಜ. ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಅವರ ‘ಬದುಕು–ಬರಹ’ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಹಿರೇವಡ್ಡಟ್ಟಿಯಿಂದ ಗದಗಕ್ಕೆ ಬಂದು ಕಡುಬಡತನದ ನಡುವೆಯೇ ಟ್ಯೂಷನ್, ಪತ್ರಿಕಾರಂಗ ಹಾಗೂ ಬರಹದ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಐ.ಕೆ. ಕಮ್ಮಾರ ಅವರು ಹಿಂದೂ–ಮುಸ್ಲಿಂ ಭಾವೈಕ್ಯತೆ ಸಾರುವ ಹಲವು ಕೃತಿಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅವರ 22 ಕೃತಿಗಳು ಮೌಲ್ಯಯುತವಾಗಿದ್ದು, ಯಾವುದೇ ಹಮ್ಮು–ಬಿಮ್ಮು, ಪ್ರಚಾರ ಬಯಸದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವ್ಯ, ನಾಟಕ, ಸಂವಾದ, ಕಾದಂಬರಿ ಹಾಗೂ ಅಧ್ಯಾತ್ಮಕ ಬರಹ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಸೇವೆ ನಿರಂತರವಾಗಿದೆ. ಇಂತಹ ಸಾಹಿತಿಯ ಬದುಕು–ಬರಹದ ಕುರಿತು ಕಸಾಪ ಕಾರ್ಯಕ್ರಮ ಆಯೋಜಿಸಿರುವುದು ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಎನ್.ಡಿ. ಕೆಲೂರ ಮಾತನಾಡಿ, ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕಿನ ಸಾಹಿತಿಗಳ ಸಮಗ್ರ ಪರಿಚಯ ಹಾಗೂ ಅವರ ಬದುಕು–ಬರಹದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ತೆರೆಮರೆಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿರುವ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕು ಎಂದರು.
ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ, ತಮ್ಮ ತವರು ನೆಲದಲ್ಲಿಯೇ ಕೃತಿ ಪರಿಚಯ ಹಾಗೂ ಅವಲೋಕನ ನಡೆಯುತ್ತಿರುವುದು ಅತೀವ ಸಂತಸ ತಂದಿದೆ. ಜೀವನಾನುಭವವೇ ಸಾಹಿತ್ಯದ ಮೂಲವಾಗಿದ್ದು, ಸಮಾಜದ ನೈಜ ಬದುಕು ಹಾಗೂ ಆಗುಹೋಗುಗಳು ಕಾವ್ಯ–ಕಥೆಗಳಿಗೆ ಪ್ರೇರಣೆಯಾಗುತ್ತವೆ. ತಮ್ಮ ಕೃತಿಗಳ ರಚನೆಗೆ ಮಣಕವಾಡ ಶ್ರೀಗಳು ಹಾಗೂ ಪುಟ್ಟರಾಜ ಗವಾಯಿಗಳಂತಹ ಪುಣ್ಯಪುರುಷರ ಪ್ರೇರಣೆ ಮತ್ತು ಶಕ್ತಿ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಎಸ್.ಬಿ. ಹಿರೇಮಠ, ಉಪಾಧ್ಯಕ್ಷ ಶಂಕರ ಕುಕನೂರ, ಕಾರ್ಯಕಾರಿಣಿ ಸದಸ್ಯರಾದ ರಮೇಶ ಪಾಟೀಲ, ಸಿ.ಕೆ. ಗಣಪ್ಪನವರ, ಗುಡ್ಲಾನೂರ, ಮಧುಮತಿ ಇಳಕಲ್, ಎಸ್.ಬಿ.ಕೆ. ಗೌಡರ, ಆರ್.ಎಲ್. ಪೋಲಿಸಪಾಟೀಲ, ನಿಂಗು ಸೊಲಗಿ, ನಾಗೇಶ ಹುಬ್ಬಳ್ಳಿ, ಸಿ.ಎಸ್. ಅರಸನಾಳ, ಮಹೇಶ ಮೇಟಿ, ಲಿಂಗರಾಜ ದಾವಣಗೆರೆ, ಜಯಶ್ರೀ ಅಳವಂಡಿ, ಜ್ಯೋತಿ ಕುರಿಯವರ, ಕೊಟ್ರೇಶ ಜವಳಿ, ಕಳಕಪ್ಪ ಜಲ್ಲಿಗೇರಿ ಮತ್ತಿತರರು ಪಾಲ್ಗೊಂಡಿದ್ದರು.
ನಿಂಗಪ್ಪ ಕುರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಸಾಪ ಗೌರವ ಕಾರ್ಯದರ್ಶಿ ವೀಣಾ ಪಾಟೀಲ ಸ್ವಾಗತಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಎಂ. ಮುಲ್ಲಾ ನಿರೂಪಿಸಿದರು.
ಸಾಹಿತ್ಯ ಮತ್ತು ಕಾವ್ಯ ಉಳ್ಳವರ ಮನೆಯಲ್ಲಿ ಹುಟ್ಟುವುದಿಲ್ಲ; ನೊಂದ–ಬೆಂದ ಸಮಾಜದ ಆಗುಹೋಗುಗಳು ಹಾಗೂ ನೈಜ ಬದುಕಿನ ಅನುಭವದಿಂದ ಹುಟ್ಟುತ್ತವೆ. ಸಾಹಿತ್ಯ ಸಮಾಜಕ್ಕೆ ಉಪಯುಕ್ತವಾದಾಗ ಸಾಹಿತಿಯ ಕೆಲಸ ಸಾರ್ಥಕವಾಗುತ್ತದೆ.
— ಐ.ಕೆ. ಕಮ್ಮಾರ, ಹಿರಿಯ ಸಾಹಿತಿ



