ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಆಗಿದ್ದರೆ ಅದಕ್ಕೆ ಲಿಂಗಾಯತ ಮಠಗಳ ಕೊಡುಗೆ ಅಪಾರ. ಸ್ವಾತಂತ್ರ್ಯಪೂರ್ವದಲ್ಲೇ ಜಾತಿ–ಮತ ಭೇದವಿಲ್ಲದೆ ಪ್ರಸಾದ ನಿಲಯಗಳನ್ನು ತೆರೆದು ಬಡ ಮಕ್ಕಳಿಗೆ ಅನ್ನದಾಸೋಹದ ಜತೆಗೆ ಜ್ಞಾನದಾಸೋಹ ನೀಡಿದ ಪರಂಪರೆ ನಮ್ಮದು ಎಂದು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಗದುಗಿನ ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಭಾನುವಾರ ನಡೆದ ಪೂಜ್ಯ ಅನ್ನದಾನ ಮಹಾಶಿವಯೋಗಿಗಳ 49ನೇ ಪುಣ್ಯಾರಾಧನೆ ಹಾಗೂ ನರೇಗಲ್ಲಿನ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅನ್ನದಾನೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದೇ ಮಠಗಳ ವೈಶಿಷ್ಟ್ಯ. ಮಕ್ಕಳು ವಿದ್ಯಾವಂತರಾಗಿ, ಜ್ಞಾನವಂತರಾಗಿ, ಶ್ರೇಷ್ಠ ವಿಜ್ಞಾನಿಗಳಾಗಬೇಕು ಎಂಬ ಉದ್ದೇಶದಿಂದ ಈ ಮಹಾವಿದ್ಯಾಲಯ ಆರಂಭಿಸಲಾಗಿದೆ. ಆನಂದಾಶ್ರಮದಲ್ಲಿ ಕಲಿತವರು ಜೀವನದುದ್ದಕ್ಕೂ ಆನಂದ ಪಡೆಯಲಿ ಎಂದರು.
ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಅನ್ನದಾಸೋಹ–ಜ್ಞಾನದಾಸೋಹದ ಸೇವೆಯನ್ನು ಶ್ಲಾಘಿಸಿದ ಅವರು, ವಯಸ್ಸಿನಲ್ಲಿ ಚಿಕ್ಕವರಾದರೂ ಜ್ಞಾನದಲ್ಲಿ ಹಿರಿಯರು ಎಂದು ಬಣ್ಣಿಸಿದರು.
90 ವರ್ಷ ಚೈತನ್ಯದಿಂದ ಬದುಕಿದ ಅನ್ನದಾನ ಶಿವಯೋಗಿಗಳು (ಬೆತ್ತದ ಅಜ್ಜ) 87ನೇ ವಯಸ್ಸಿನಲ್ಲೂ ಹಳ್ಳಿ–ಹಳ್ಳಿಗೆ ತೆರಳಿ ಭಿಕ್ಷೆ ಬೇಡಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 13 ಬೋರ್ಡಿಂಗ್ಗಳನ್ನು ಮುನ್ನಡೆಸಿದ ಮಹಾನ್ ಸಾಧಕರು. ಅವರ ಜೀವನಾಧಾರಿತ ಸಿನಿಮಾ ಆರು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ತೋಂಟದ ಶ್ರೀಗಳು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ಜ.ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಣವೇ ಬದುಕಿನ ಪೋಷಕಾಂಶ ಎಂದರು. ಕಾರು, ಬಂಗಲೆಗಳ ಕನಸಿಗಿಂತ ಆದರ್ಶವಾಗಿ ಬದುಕುವ ಕನಸು ಕಾಣಬೇಕು. ಸಮಯವನ್ನು ವ್ಯರ್ಥ ಮಾಡದೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಪ್ರಾ. ಎಂ.ಸಿ. ಕಟ್ಟಿಮನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಪಿ. ಸಂಶಿಮಠ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಹೇಶ್ವರ ಸ್ವಾಮಿಗಳು, ಡಾ.ಜಿ.ಕೆ. ಕಾಳೆ, ಆರ್.ಬಿ. ಪಾಟೀಲ, ಜಿ.ಎನ್. ಪಾಟೀಲ, ಡಿಡಿಪಿಐ ಆರ್.ಎಸ್. ಬುರಡಿ, ಡಾ.ಬಿ.ಎನ್. ಪಾಟೀಲ, ವ್ಹಿ.ಆರ್. ಪಾಟೀಲ, ಶರಣಬಸಪ್ಪ ಗುಡಿಮನಿ, ಗಿರೀಶಗೌಡ ಪಾಟೀಲ, ಈಶಣ್ಣ ಮುನವಳ್ಳಿ, ಸದು ಮದರಿಮಠ ಮತ್ತಿತರರು ಉಪಸ್ಥಿತರಿದ್ದರು. ಗಣ್ಯರು, ಭಕ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪರಿಶ್ರಮಕ್ಕೆ ಶಾರ್ಟ್ಕಟ್ ಇಲ್ಲ. ಗಿಡ ಹತ್ತಿದರೆ ಹಣ್ಣು ಸಿಗುತ್ತದೆ; ಕೆಳಗೆ ಮಲಗಿದರೆ ಸಿಗುವುದಿಲ್ಲ. ವಿದ್ಯಾರ್ಥಿಗಳು ಪ್ರಯತ್ನದಿಂದ ಜ್ಞಾನ ಸಂಪಾದಿಸಿ, ತಂದೆ–ತಾಯಿ ಹಾಗೂ ಗುರುಹಿರಿಯರನ್ನು ಗೌರವಿಸಿ, ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
— ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಮಠ, ಗದಗ



