ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕಲಾಪೋಷಕರ ಮಠ, ಸುಕ್ಷೇತ್ರ ಸಿದ್ಧನಕೊಳ್ಳದ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕೀರ್ತನ ಮೂವಿ ಮೇಕರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಸಾಕ್ಷಿ’ ಕಿರುಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕಲನ ಕಾರ್ಯ ಆರಂಭವಾಗಿದೆ.
ಕೊಲೆ ರಹಸ್ಯವನ್ನು ಭೇದಿಸುವ ರೋಚಕ ಕಥಾಹಂದರ ಹೊಂದಿರುವ ಈ ಕಿರುಚಿತ್ರದ ಚಿತ್ರೀಕರಣ ಬೆಂಗಳೂರಿನ ವಿವಿಧೆಡೆ ಐದು ದಿನಗಳ ಕಾಲ ನಡೆದಿದೆ.
ಈ ಹಿಂದೆ ‘ಒಬ್ಬಟ್ಟು’ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾಸ್ಯ ಕಥಾಹಂದರದ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿ ಬಿಡುಗಡೆ ಮಾಡಿರುವ ನಿರ್ದೇಶಕ ಲೋಕೇಶ್ ವಿದ್ಯಾಧರ, ಇದೀಗ ತಮ್ಮ ನಿರ್ದೇಶನದ ಎರಡನೇ ಸಿನಿಮಾ ‘ಹೂಗಾರ’ ಚಲನಚಿತ್ರವನ್ನು ಸೆನ್ಸಾರ್ಗೆ ಕಳುಹಿಸಲು ಅಂತಿಮ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮೂರನೇ ಸಸ್ಪೆನ್ಸ್, ಥ್ರಿಲ್ಲರ್ ಹಿನ್ನೆಲೆಯ ಸಿನಿಮಾದ ಸ್ಕ್ರಿಪ್ಟ್ ಸಿದ್ಧಪಡಿಸಲಾಗುತ್ತಿದ್ದು, ಕಲಾವಿದರ ಆಯ್ಕೆಯೂ ನಡೆದಿದೆ.
ತಂಡದ ಸದಸ್ಯರು ಬಿಡುವಿನ ಅವಧಿಯಲ್ಲೂ ಸಕ್ರಿಯವಾಗಿರಲು ಕಿರುಚಿತ್ರ ನಿರ್ಮಿಸುವ ನಿರ್ಧಾರ ಕೈಗೊಂಡು ‘ಸಾಕ್ಷಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದಿನ ತಿಂಗಳು ಒಟಿಟಿ ಹಾಗೂ ಯೂಟ್ಯೂಬ್ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಚಿತ್ರಪ್ರೇಮಿಗಳು ತಂಡವನ್ನು ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ ತಿಳಿಸಿದ್ದಾರೆ.
ಕಿರುಚಿತ್ರದಲ್ಲಿ ಲೋಕೇಶ್ ವಿದ್ಯಾಧರ, ವಿದ್ಯಾಶ್ರೀ, ಹುನಗುಂದದ ಮಹಾಂತೇಶ್ ಹಳ್ಳೂರ, ಸತೀಶ್ ಶೆಟ್ಟಿ, ಮುತ್ತುರಾಜ್ ಬುದ್ನಿ, ಜೀವನ ಗೌಡ, ಗೀತಾ, ರೋಹಿತ್, ಪಲ್ಲವಿ, ಸುರೇಶ್ ಗ್ಲೋರಿ, ಕಿಟ್ಟಿ ತಾಳಿಕೋಟೆ ಮೊದಲಾದವರು ಅಭಿನಯಿಸಿದ್ದಾರೆ.
ಕ್ಯಾಮೆರಾ-ಬೆಟ್ಟೆಗೌಡ ಕಿಲಾರ, ಮೇಕಪ್-ಗೋವರ್ಧನ್, ಹೇರ್ಸ್ಟೈಲ್-ಶಿವು, ಸಂಕಲನ-ಶಿವರಾಜ್, ಡಿಐ-ಜೀವನ್, ನೃತ್ಯ-ರಾಜು ಮಾಸ್ಟರ್. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಲೋಕೇಶ್ ವಿದ್ಯಾಧರ ವಹಿಸಿಕೊಂಡಿದ್ದಾರೆ. ಕೀರ್ತನ ಮೂವಿ ಮೇಕರ್ಸ್ ಹಾಗೂ ಚಿತ್ರತಂಡದ ಬಳಗದ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗಿದೆ.



