ವಿಜಯಸಾಕ್ಷಿ ಸುದ್ದಿ, ಮುಳಗುಂದ
ವಿಕಲಚೇತನನೊಬ್ಬ ಆಶ್ರಯ ಮನೆ ಮಂಜೂರಾತಿ ಮಾಡುವಂತೆ ಒತ್ತಾಯಿಸಿ ಇಲ್ಲಿನ ಪಟ್ಟಣ ಪಂಚಾಯತಿ ಕಾರ್ಯಾಲಯದ ಎದುರು ಗರ್ಭಿಣಿ ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಮುಳಗುಂದ ಪಟ್ಟಣದ ಹಜರೇಶಾ ಮಕಾಂದಾರ ಎಂಬ ವಿಕಲಚೇತನ 2000ನೇ ಇಸ್ವಿಯಿಂದ ಪಪಂಗೆ ಜಾಗ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಅಂದಿನಿಂದ ಇಂದಿನವರೆಗೂ ಈತನಿಗೆ ಪಪಂನವರು ನಿವೇಶನ ಮಂಜೂರು ಮಾಡದೇ ಬರೀ ಆಶ್ವಾಸನೆ ನೀಡುತ್ತಾ ಬಂದಿದ್ದರು.
ಇದರಿಂದ ಬೇಸತ್ತ ಹಜರೇಶಾ 2017ರಲ್ಲಿ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದರೂ ಅದಕ್ಕೂ ಯಾವುದೇ ಉತ್ತರ ಬರಲಿಲ್ಲ. ಈತನಿಗೆ ನಾಲ್ಕು ಮಕ್ಕಳಿದ್ದು, ಹೆಂಡತಿ ಮಕ್ಕಳೊಂದಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದರೂ ಯಾವೊಬ್ಬ ಅಧಿಕಾರಿಗಳು ತಿರುಗಿ ಕೂಡಾ ನೋಡಲಿಲ್ಲ. ಇದರಿಂದ ಬೇಸತ್ತ ಈತ ಈಗ ಹೆಂಡತಿಯ ಹೆರಿಗೆಯಾದರೆ ಬೀದಿಯಲ್ಲಿರುವುದು ಬೇಡ ಪಪಂನಲ್ಲಿಯೇ ಆಗಲಿ ಎಂದು ಹೊರಸು ಸಮೇತ ಪಪಂ ಮುಂದೆ ಪ್ರತಿಭಟನೆ ನಡೆಸಿದ.
ಈತನ ಪ್ರತಿಭಟನೆಗೆ ಮಣಿದ ಸದಸ್ಯರೆಲ್ಲ ಸೇರಿ ನಿವೇಶನ ನೀಡುವವರೆಗೂ ತಾತ್ಕಾಲಿಕವಾಗಿ ಖಾಲಿ ಇದ್ದ ಒಂದು ಆಶ್ರಯ ಮನೆ ನೀಡುವಂತೆ ಸೂಚಿಸಿದರು.
ನನ್ನ ವಿಕಲಚೇತನಕ್ಕೆ ಪಪಂ ಕಾರಣ. ಈ ಹಿಂದೆ 2006ರಲ್ಲಿ ಪಪಂ ದಿನಗೂಲಿ ಕೆಲಸಗಾರನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆಗ ಪಪಂ ಟ್ಯಾಂಕರಗೆ ನೀರು ತುಂಬಲು ಹೋಗಿ ಟ್ಯಾಂಕರನ ಉದ್ದಿಗೆ ಕಾಲ ಮೇಲೆ ಬಿದ್ದು ಕಾಲು ಕಳೆದುಕೊಳ್ಳಬೇಕಾಯಿತು. ಇದರಿಂದ ನಾನು ಜೀವನಪರ್ಯಂತ ನೋವು ಅನುಭವಿಸುವಂತಾಗಿದೆ.
-ಹಜರೇಶಾ ಮಕಾಂದಾರ, ವಿಕಲಚೇತನ
ಆತ ವಿಕಲಚೇತನನಾಗಿದ್ದರಿಂದ ಸರಕಾರ ನಿವೇಶನ ನೀಡುವವರೆಗೂ ತಾತ್ಕಾಲಿಕವಾಗಿ ಖಾಲಿ ಇದ್ದ ಒಂದು ಆಶ್ರಯ ಮನೆಯನ್ನು ನೀಡಿ ಆತನಿಗೆ ಅಲ್ಲಿಯೇ ಇರಲು ಸೂಚಿಸಲಾಗಿದೆ. ನಿವೇಶನ ನೀಡಲು ಈತನಿಗೆ ಮೊದಲ ಆದ್ಯತೆ ನೀಡುತ್ತೇವೆ.
–ಮಂಜುನಾಥ ಗುಳೇದ, ಮುಖ್ಯಾಧಿಕಾರಿಗಳು. ಪಪಂ ಮುಳಗುಂದ