ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ : ಕವಿ ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬರೂ ಅವರ ವಚನಗಳು ಹಾಗೂ ತತ್ವಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ಮುಂದಾಗಬೇಕು ಎಂದು ಪ್ರಧಾನ ಗುರು ಎ.ವಾಯ್. ಗಜಾಕೋಶ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಯತ್ನ ವಚನಗಳ ಮೂಲಕ ನಡೆದಿವೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಶಿಕ್ಷಕ ವಾಯ್.ಎಚ್. ಪೂಜಾರ ಮಾತನಾಡಿ, ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯನ್ನು ನೀಡಿರುವ ಶ್ರೇಷ್ಠ ವಚನಕಾರ ಸರ್ವಜ್ಞ ರಚಿಸಿರುವ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತಾಗಿವೆ. ಕವಿ ಸರ್ವಜ್ಞ ಅವರ ವಚನಗಳು ಜೀವನಕ್ಕೆ ದಾರಿದೀಪ ವಾಗಿವೆ ಎಂದರು.
ಶಿಕ್ಷಕರಾದ ಯು.ಆರ್. ಕುಲಕರ್ಣಿ, ಡಿ.ಎಸ್. ಹುಂಡೇಕಾರ, ಆರ್.ಕೆ. ಹುನಗುಂದ, ಎಂ.ಎಸ್. ಸಜ್ಜನರ, ಕೆ.ಬಿ. ಚಲವಾದಿ ಮುಂತಾದವರಿದ್ದರು.