ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ರಾಮನಾಮದಲ್ಲಿ ಅದೆಷ್ಟು ಶಕ್ತಿ ಇದೆ ಎಂಬುದನ್ನು ಈ ಜಗತ್ತಿಗೆ ತೋರಿಸಿಕೊಟ್ಟವರು ಸದ್ಗುರು ಶ್ರೀ ಬ್ರಹ್ಮಚೈತನ್ಯರು. ರಾಮನಾಮದ ಬಲದಿಂದಲೇ ಈ ಲೋಕವನ್ನುದ್ಧರಿಸಿದ ಮಹಾತ್ಮರು ಬ್ರಹ್ಮಚೈತನ್ಯರು ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬುಧವಾರ ಆಚರಿಸಲಾದ ಶ್ರೀ ಬ್ರಹ್ಮಚೈತನ್ಯರ ತೊಟ್ಟಿಲೋತ್ಸವದದಲ್ಲಿ ಅವರು ಮಾತನಾಡಿದರು.
ಗೋಂದಾವಲೇಕರ್ ಮಹಾರಾಜ ಎಂದೂ ಕರೆಯಿಸಿಕೊಳ್ಳುವ ಶ್ರೀ ಬ್ರಹ್ಮಚೈತನ್ಯರು ರಾಮನಾಮದ ಜಪ ಸಾಧನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಕೇವಲ ತಾವಷ್ಟೇ ಅಲ್ಲದೆ, ಜಗತ್ತಿನ ಎಲ್ಲ ಭಕ್ತರೂ ಈ ನಾಮದಿಂದಲೇ ಸದ್ಗತಿಯನ್ನು ಕಾಣಬೇಕೆಂಬ ಇಚ್ಛೆ ಅವರದ್ದಾಗಿತ್ತು. ಹೀಗಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಅನೇಕ ಭಾಗಗಳಲ್ಲಿ ಅವರು ಶ್ರೀರಾಮ ಮಂದಿರಗಳನ್ನು ಸ್ಥಾಪಿಸಿ ರಾಮನಾಮದ ಬಲವರ್ಧನೆಗೆ ಕಾರಣರಾದರು ಎಂದು ಹೇಳಿದರು.
ಮಹನೀಯರ ದಾರಿಯಲ್ಲಿ ನಡೆದಿರುವ ಹೆಬ್ಬಳ್ಳಿ ಶ್ರೀ ಚೈತನ್ಯಾಶ್ರಮದ ಶ್ರೀ ದತ್ತಾವಧೂತರು ರಾಮನಾಮ ಸ್ಮರಣೆಗೆ ತಮ್ಮ ಜೀವನವನ್ನು ಮುಡುಪಿಟ್ಟು, ಸಾಧ್ಯವಾದಷ್ಟು ಭಾವಿಕ ಭಕ್ತರಿಂದಲೂ ಈ ಕಾರ್ಯವನ್ನು ನೆರವೇರಿಸುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ ಎಂದು ಹೇಳಿದ ಕುಲಕರ್ಣಿ, ಬ್ರಹ್ಮಚೈತನ್ಯರ ಅನೇಕ ಲೀಲೆಗಳ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವೇ.ಮೂ. ವಿಶ್ವನಾಥಭಟ್ಟ ವೈದ್ಯ, ಎ.ಜಿ. ಕುಲಕರ್ಣಿ(ಕುರಗಡ್ಡಿ), ಎಸ್.ಎಚ್. ಕುಲಕರ್ಣಿ, ಆನಂದ ಕಾಳೆ, ವೆಂಕಟೇಶ ಕುಲಕರ್ಣಿ, ಆನಂದ ಕುಲಕರ್ಣಿ, ರಂಗನಾಥ ಕುಲಕರ್ಣಿ, ಜಗನ್ನಾಥ ಸೂರಭಟ್ಟನವರ ಮುಂತಾದವರಿದ್ದರು. ಸುಮಂಗಲೆಯರು ಸದ್ಗುರುಗಳನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಜೋಗುಳ ಹಾಡಿದರು.