ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವುದು. ಇದರೊಂದಿಗೆೆ ಕುರಹಟ್ಟಿ ಗ್ರಾಮದಲ್ಲಿ 50 ಲಕ್ಷ ರೂಗಳ ವೆಚ್ಚದಲ್ಲಿ ಪ್ರೌಢಶಾಲೆಯ ಮೂರು ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಹಾಗೂ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಭರವಸೆ ನೀಡಿದರು.
ಅವರು ಬುಧವಾರ ಕುರಹಟ್ಟಿ ಗ್ರಾಮದ ಪ್ರೌಢಶಾಲೆಯ ಎರಡು ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳು ದೊರೆಯಬೇಕು ಎನ್ನುವುದು ನನ್ನ ಮೊದಲ ಆದ್ಯತೆಯಾಗಿದೆ. ಇದೇ ಕಾರಣದಿಂದ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದೇನೆ. ಈ ಬಾರಿಯೂ ಸಹ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಗ್ರಾಮದಲ್ಲಿ ಈಗಾಗಲೇ ಎರಡು ಕೊಠಡಿಗಳು ಉದ್ಘಾಟನೆಗೊಂಡಿದ್ದು, ಮೂರನೇ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಹ ಇಂದು ನೆರವೇರಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಗ್ರಾಮದ ಪ್ರೌಢಶಾಲೆಗೆ ಹೆಚ್ಚುವರಿಯಾಗಿ ಇನ್ನೆರಡು ಕೊಠಡಿಗಳನ್ನು ನಿರ್ಮಿಸಲಾಗುವುದು. ಒಟ್ಟು ಶಾಲಾ ಕೊಠಡಿ ನಿರ್ಮಾಣಕ್ಕೆ 50 ಲಕ್ಷ ರೂಗಳನ್ನು ಒದಗಿಸಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಶಾಲಾ ಕಟ್ಟಡಕ್ಕೆ ಭೂದಾನ ಮಾಡಿದ ಎಲ್.ಆರ್. ದೇಸಾಯಿ ಕುಟುಂಬದವರನ್ನು ಸ್ಮರಿಸಲಾಯಿತು. ಗಂಗಾಧರ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಬಸವರಾಜ ನವಲಗುಂದ, ಯೂಸುಪ್ ಇಟಗಿ, ಡಿಡಿಪಿಐ ಎಲ್.ಆರ್. ರಡ್ಡೆರ, ಬಿಇಒ ರುದ್ರಪ್ಪ ಹುರಳಿ, ಪಿಡಬ್ಲುಡಿ ಇಇ ಬಲರಾಮ ನಾಯ್ಕರ್ ಸೇರಿದಂತೆ ಗ್ರಾ.ಪಂ, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಗ್ರಾಮದ ಪ್ರೌಢಶಾಲೆ ವಿಶಾಲವಾದ ಮೈದಾನವನ್ನು ಹೊಂದಿದೆ. ಗ್ರಾ.ಪಂನವರು ನರೇಗಾ ಯೋಜನೆಯಲ್ಲಿ ಶಾಲೆಯ ಸುತ್ತಲೂ ಕಂಪೌಂಡನ್ನು ನಿರ್ಮಿಸಬೇಕು. ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ನಿಮ್ಮೂರ ಶಾಲೆಯ ಅಭಿವೃದ್ಧಿಗೆ ನೀವೆಲ್ಲರೂ ಪ್ರಮಾಣಿಕ ಪ್ರಯತ್ನ ಮಾಡಬೇಕು.
– ಜಿ.ಎಸ್. ಪಾಟೀಲ.
ಶಾಸಕರು, ಖನಿಜ ನಿಗಮದ ಅಧ್ಯಕ್ಷರು.