ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾಚಣಾ ಅಕ್ರಮಗಳನ್ನು ತಡೆಗಟ್ಟಲು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು 24 ಚೆಕ್ಪೊಸ್ಟ್ ಗಳನ್ನು ತೆರೆಯಲಾಗಿದೆ. ಇದರಲ್ಲಿ 12 ಚೆಕ್ಪೊಸ್ಟ್ ಗಳು ಮಹಾನಗರ ಪೊಲೀಸ್ ವ್ಯಾಪ್ತಿಯಲ್ಲಿದ್ದು, ಗುರುವಾರ ಸಂಜೆ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಅವರು ವಿವಿಧ ಚೆಕ್ಪೊಸ್ಟ್ ಗಳಿಗೆ ದಿಢೀರ್ ಭೇಟಿ ನೀಡಿ, ವಾಹನಗಳ ತಪಾಸಣೆ, ಚೆಕ್ಪೊಸ್ಟ್ ಸಿಬ್ಬಂದಿಗಳ ಕಾರ್ಯವೈಖರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಚೆಕ್ಪೊಸ್ಟ್ಗಳಲ್ಲಿ ಪ್ರತಿ ವಾಹನವನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಸರಿಯಾಗಿ ತಪಾಸಣೆ ಮಾಡಿದಾಗ ನಿಯಮಾನುಸಾರ ಪೂರಕ ದಾಖಲೆ ಇಲ್ಲದ ಹಣ, ವಸ್ತು, ಉಡುಗೊರೆಗಳನ್ನು ಸೀಜ್ ಮಾಡಬೇಕು. ತಪಾಸಣೆ ಸಂದರ್ಭದಲ್ಲಿ ಸಂಶಯ ಬಂದಲ್ಲಿ ಕೂಲಂಕುಷವಾಗಿ ಪರಿಶೀಲಿಸಿ, ಸಮರ್ಥನೀಯ ದಾಖಲಾತಿಗಳನ್ನು ಪಡೆಯಬೇಕೆಂದು ಕರ್ತವ್ಯನಿರತ ಸಿಬ್ಬಂದಿಗಳಿಗೆ ಸೂಚಿಸಿದರು.
ಪ್ರತಿ ಚೆಕ್ಪೊಸ್ಟ್ ಕರ್ತವ್ಯಕ್ಕೆ ನಿಯೋಜನೆಗೊಂಡ ಮ್ಯಾಜಿಸ್ಟ್ರೇಟ್ ಅಧಿಕಾರಿ, ಸಿಬ್ಬಂದಿಗಳು ತಮಗೆ ನಿಗದಿಪಡಿಸಿದ ಸಮಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಚೆಕ್ಪೊಸ್ಟ್ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ, ವಾಹನಗಳ ತಪಾಸಣೆ ಕಾರ್ಯವನ್ನು ನಿಯಮಾನುಸಾರ ಸಮರ್ಪಕವಾಗಿ ಮಾಡುತ್ತಿರುವ ಬಗ್ಗೆ ಸಿಸಿ ಟಿವಿಗಳ ಮೂಲಕ ಜಿಲ್ಲಾ ಕಂಟ್ರೋಲ್ ರೂಮ್ನಲ್ಲಿ ನಿರಂತರ ನಿಗಾವಹಿಸಲಾಗುತ್ತಿದೆ. ಯಾವುದೇ ರೀತಿಯ ಕರ್ತವ್ಯ ಲೋಪ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹಳಿಯಾಳ ಚೆಕ್ಪೋಸ್ಟ್ ನಲ್ಲಿ ಸ್ವತಃ ತಾವೇ ವಾಹನಗಳ ತಪಾಸಣೆ ಮಾಡಿ, ವಾಹನ ಚಾಲಕರಿಗೆ, ಪ್ರಯಾಣಿಕರಿಗೆ ಮಾದರಿ ನೀತಿ ಸಂಹಿತೆ ಬಗ್ಗೆ ತಿಳುವಳಿಕೆ ನೀಡಿದರು.