ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ ಮತ್ತು ನೂತನವಾಗಿ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ ಸಮಾರಂಭವು ಮಂಗಳವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿದವು.
ಬೆಳಿಗ್ಗೆ ನವಗ್ರಹ ಸಹಿತ ಲಕ್ಷ್ಮಿ ನಾರಾಯಣ ಹೋಮದೊಂದಿಗೆ ಧಾರ್ಮಿಕ ಕಾರ್ಯಗಳು ಪ್ರಾರಂಭಗೊಂಡವು. ಕಳಸಾರೋಹಣಕ್ಕೂ ಮುನ್ನ ಗ್ರಾಮದ ಶ್ರೀ ಹನುಮಂತ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನದವರೆಗೆ ಕಳಸವನ್ನು ಮೆರವಣಿಗೆಯಲ್ಲಿ ಪೂರ್ಣ ಕುಂಭದೊಂದಿಗೆ ತರಲಾಯಿತು.
ಈ ಎಲ್ಲ ಧಾರ್ಮಿಕ ಕಾರ್ಯಗಳ ನೇತೃತ್ವವನ್ನು ಬಳೂಟಗಿಯ ವೆಂಕಟೇಶಾಚಾರ್ ವಹಿಸಿಕೊಂಡಿದ್ದರು.
ಕಲಿಯುಗದಲ್ಲಿ ಇಂತಹ ಧಾರ್ಮಿಕ ಕಾರ್ಯಗಳ ಆಚರಣೆಯಿಂದ ಭಗವಂತನ ಒಲುಮೆ ಸಾಧ್ಯವಿದೆ. ಇಂತಹ ಮಹತ್ಕಾರ್ಯವನ್ನು ಮಾಡಿದ ಸುರೇಶ ಕುಲಕರ್ಣಿ ಮತ್ತು ದೇವಸ್ಥಾನದ ಜೋಷಿ ಬಂಧುಗಳಿಗೂ ಅನಂತ ಕೃತಜ್ಞತೆಗಳು ಸಮರ್ಪಿತವಾಗುತ್ತವೆ ಎಂದು ವೆಂಕಟೇಶಾಚಾರ್ ಹೇಳಿದರು.
ಜಕ್ಕಲಿಯ ಜೋಷಿ ಮನತೆನದವರಾದ ನರಸಿಂಹಾಚಾರ್, ಕೃಷ್ಟಾಚಾರ್, ಗೋವಿಂದಾಚಾರ್ ಲಕ್ಷ್ಮಿಬಾಯಿ, ಅಂಬಾಬಾಯಿ, ರಂಗಾಚಾರ್ ಮುಂತಾದವರು ಪ್ರತಿ ವರ್ಷವೂ ಶ್ರೀ ವೆಂಕಟೇಶನ ದರುಶನಕ್ಕೆ ತಿರುಪತಿಗೆ ಹೋಗಿ ಬರುತ್ತಿದ್ದರು. ಕಾಡು-ಮೇಡು ಅಲೆದು ಶ್ರೀ ವೆಂಕಟೇಶ್ವರನ ದರುಶನ ಪಡೆದು ಬರುವುದು ಸಾಹಸದ ಕೆಲಸವೇ ಆಗಿತ್ತು. ಸರಿಸುಮಾರು ಎರಡು ಶತಮಾನಗಳ ಹಿಂದೆ ಹೀಗೇ ತಿರುಪತಿಗೆ ಹೋಗಿ ಬರುವಾಗ ಮನೆಯ ಹಿರಿಯರಾದ ನರಸಿಂಹಾಚಾರ ವೆಂಕಟೇಶನಲ್ಲಿ, ಸ್ವಾಮೀ! ಇಷ್ಟು ದಿನ ನಮ್ಮ ಮೈಯಲ್ಲಿ ಶಕ್ತಿ ಇತ್ತು. ಹೇಗೋ ನಿನ್ನ ಸನ್ನಿಧಿಗೆ ಬಂದು ಹೋಗುತ್ತಿದ್ದೆವು. ಆದರೆ ಈಗ ನಮಗೂ ವಯಸ್ಸಾಗುತ್ತ ಬಂತು.
ಮುಂದಿನ ಸಾರೆ ನಮಗೆ ನಿನ್ನ ಸನ್ನಿಧಿಗೆ ಬರಲು ಆಗುತ್ತದೆಯೋ ಇಲ್ಲವೋ. ಅದಕ್ಕಾಗಿ ಭಕ್ತ ವತ್ಸಲನೆಂಬ ಹೆಸರು ಪಡೆದಿರುವ ನೀನೇ ಯಾಕೆ ಇಲ್ಲಿಗೆ ಬಂದಿರಬಾರದು? ಎಂದು ಬೇಡಿಕೊಂಡರು.
ದಾರಿ ಮಧ್ಯದಲ್ಲಿ ಬೇಡಿಕೊಂಡ ಅವರ ಬೇಡಿಕೆ ಊರು ಸಮೀಪಿಸುತ್ತಿದ್ದ ಹಾಗೆ ಪೂರ್ಣಗೊಂಡಿತು. ಇವರು ಯಾತ್ರೆಗೆಂದು ಹೊತ್ತೊಯ್ದಿದ್ದ ಜೋಳಿಗೆಯಲ್ಲಿ ದಾರಿ ಮಧ್ಯದ ಉಪಹಾರಕ್ಕೆಂದು ಇರಿಸಿಕೊಂಡಿದ್ದ ಒಂದು ಅರಳು ಹಿಟ್ಟಿನ ಗಂಟಿತ್ತು. ಅದು ಊರು ಸಮೀಪಿಸದಂತೆ ಭಾರವಾಗತೊಡಗಿತು. ಗಂಟನ್ನು ಹೊತ್ತಿದ್ದವರು ಅಚ್ಚರಿಪಟ್ಟರು. ಈವರೆಗೆ ಹಗುರವಾಗಿದ್ದ ಈ ಗಂಟು ಇಷ್ಟೊಂದು ಭಾರವಾಗುತ್ತಿದೆಯಲ್ಲ ಎನ್ನುತ್ತ ಮನೆಗೆ ಬಂದು ಬಿಚ್ಚಿ ನೋಡಿದರೆ ಅದರಲ್ಲಿ ಕರಿ ಶಿಲೆಯ ವೆಂಕಟೇಶನ ಮೂರ್ತಿಯಿತ್ತು.
ನಂತರ, ಊರ ಮಧ್ಯದಲ್ಲಿನ ದಿಬ್ಬದಲ್ಲಿ ಪ್ರತಿಷ್ಠಾಪಿಸಿ ಚಿಕ್ಕದೊಂದು ಗುಡಿ ನಿರ್ಮಿಸಿ ಪೂಜಿಸತೊಡಗಿದರು. ಮೊದಲು ಕೇವಲ ಒಂದು ಚೋಟಿನಷ್ಟು ಅಳತೆಯಿದ್ದ ವೆಂಕಟೇಶ ದಿನಗಳೆದಂತೆ ಬೆಳೆಯುತ್ತ ಬಂದ. ಈಗ ಶ್ರೀ ವೆಂಕಟೇಶನ ಎತ್ತರ ಏನಿಲ್ಲವೆಂದರೂ ಮೂರು-ಮೂರುವರೆ ಅಡಿಯವರೆಗಿದೆ. ಇದು ಭಗವಂತನ ಪವಾಡವಲ್ಲದೆ ಇನ್ನೇನು ಎನ್ನುತ್ತಾರೆ ಸಂಗಮೇಶ ಮೆಣಿಸಿಗಿ ಮತ್ತು ಜಕ್ಕಲಿಯ ಗ್ರಾಮಸ್ಥರು.
1984ರಲ್ಲಿ ನಿರ್ಮಾಣಗೊಂಡ ದೇವಸ್ಥಾನ ಕಾಲನ ಹೊಡೆತಕ್ಕೆ ಸಿಕ್ಕು ಜರ್ಜರಿತವಾಗಿತ್ತು. ಆಗ ಜಕ್ಕಲಿಯವರೇ ಆದ ಸುರೇಶ ಕುಲಕರ್ಣಿ ಈ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ನಮ್ಮೊಂದಿಗೆ ಚರ್ಚಿಸಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದರು. ದೇವಸ್ಥಾನದ ನೂತನ ರೂಪವನ್ನು ಕಂಡು ಆನಂದವಾಗಿದೆ.
– ಶ್ರೀನಿವಾಸ ವೆಂಕಣ್ಣಾಚಾರ್ ಜೋಷಿ, ಜಕ್ಕಲಿ.
ಒಂದಿನ ನಮ್ಮ ಬಂಧುಗಳೊಂದಿಗೆ ಇದೇ ದೇವಸ್ಥಾನದಲ್ಲಿ ಊಟಕ್ಕೆ ಕುಳಿತಿದ್ದೆವು. ಆ ಸಮಯದಲ್ಲಿ ಜೋರಾಗಿ ಮಳೆ ಸುರಿದು ಕಾರ್ಯಕ್ಕೆ ಅಡ್ಡಿಯಾಯಿತು. ಅಂದೇ ನಾನು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದುಕೊಂಡೆ. ಸ್ವಪ್ನದಲ್ಲಿ ಸ್ವಾಮಿಯು ಬಂದು ನೀನು ಕೆಲಸವನ್ನು ಪ್ರಾರಂಭಿಸು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದಂತಾಯಿತು. ಮರುದಿನ ಜೋಷಿಯವರನ್ನು ಭೇಟಿಯಾಗಿ ವಿಷಯ ತಿಳಿಸಿ ಒಪ್ಪಿಗೆ ಕೇಳಿದೆ. ಅವರೂ ತಕ್ಷಣ ಒಪ್ಪಿಗೆ ನೀಡಿ, ಜೋಷಿ ಬಂಧುಗಳು ಮತ್ತು ಕುಲಕರ್ಣಿ ಬಂಧುಗಳು ಆರ್ಥಿಕ ನೆರವನ್ನೂ ನೀಡಿದರು. ಇದೆಲ್ಲವೂ ಸ್ವಾಮಿಯ ಕೃಪೆಯಿಂದ ಆದದ್ದು.
-ಸುರೇಶ ಕುಲಕರ್ಣಿ.
ದೇವಸ್ಥಾನದ ಜೀರ್ಣೋದ್ಧಾರಕ.