ವಿಜಯಸಾಕ್ಷಿ ಸುದ್ದಿ, ರೋಣ : ನರೇಗಾ ಯೋಜನೆಯಡಿ ಈ ಬಾರಿ ಸಮುದಾಯ ಕಾಮಗಾರಿಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು, ಗ್ರಾಮೀಣ ಪ್ರದೇಶಗಳ ಬಡ ಜನರಿಗೆ ನರೇಗಾ ಯೋಜನೆಯ ಲಾಭ ದೊರಕುವ ಹಾಗೆ ಮಾಡುವುದು ನಮ್ಮ ಕರ್ತವ್ಯ. ಅದಕ್ಕೆ ನಿಮ್ಮೆಲ್ಲರ ಸಹಕಾರ ಕೂಡ ಬಹಳ ಮುಖ್ಯ ಎಂದು ಅಸೂಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಿಮ್ಮಣ್ಣವರ ಹೇಳಿದರು.
ಅಸೂಟಿ ಗ್ರಾ.ಪಂನಲ್ಲಿ ನಡೆದ ಕಾಯಕ ಬಂಧುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಪ್ರೀಲ್ 1ರಿಂದ ಅಸೂಟಿ ಗ್ರಾ.ಪಂನಲ್ಲಿ ನರೇಗಾ ಸಾಮೂಹಿಕ ಕಾಮಗಾರಿ ಆರಂಭವಾಗಲಿದ್ದು, ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸವನ್ನು ತಾವು ಮಾಡಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಯೋಜನೆಯಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತೆ ಆಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ ಎಂದರು.
ಏಪ್ರಿಲ್ 1ರಿಂದ ನರೇಗಾ ಕೂಲಿಕಾರರಿಗೆ ದಿನವೊಂದಕ್ಕೆ 349 ರೂಪಾಯಿ ನಿಗದಿಪಡಿಸಲಾಗಿದೆ. ಬೇಸಿಗೆ ಅವಧಿಯ 100 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದರೆ ಕೂಲಿಕಾರರಿಗೆ 34900 ರೂಪಾಯಿ ಸಿಗುತ್ತದೆ. ಕೂಲಿಕಾರರು ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಬಿತ್ತನೆಯ ಕಾರ್ಯಕ್ಕೆ ಸದುಪಯೋಗ ಪಡಿಸಿಕೊಳ್ಳಲು ನೆರವಾಗುವುದು ಎಂದು ಅಭಿಪ್ರಾಯಪಟ್ಟರು.
ಬಿಎಫ್ಟಿ ಅಶೋಕ ಕಂಬಳಿ, ಕಾಯಕ ಮಿತ್ರರಾದ ಪವಿತ್ರಾ ನಾಡಗೌಡರ, ಕಾಯಕ ಬಂಧುಗಳು, ನರೇಗಾ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.