HomeGadag Newsಹುದ್ದೆ ಅಧಿಕಾರವಲ್ಲ, ಸಮಾಜ ಸೇವೆಗೆ ಅವಕಾಶ: ಕೆ.ಎ. ಬಳಿಗೇರ

ಹುದ್ದೆ ಅಧಿಕಾರವಲ್ಲ, ಸಮಾಜ ಸೇವೆಗೆ ಅವಕಾಶ: ಕೆ.ಎ. ಬಳಿಗೇರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಪರಸ್ಪರ ಸಹಕಾರ, ಒಗ್ಗಟ್ಟು ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘದ ಹುದ್ದೆಗಳನ್ನು ಅಧಿಕಾರವೆಂದು ಭಾವಿಸದೆ, ಸಮಾಜ ಸೇವೆಗೆ ದೊರೆತ ಅವಕಾಶವೆಂದು ಪರಿಗಣಿಸಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ರವಿವಾರ ನಡೆದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಬಣಜಿಗ ಸಮಾಜದ ಇತಿಹಾಸ, ಪರಂಪರೆ ಹಾಗೂ ಹಿರಿಯರು ನೀಡಿರುವ ಕೊಡುಗೆಗಳನ್ನು ಅರಿತು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಇಂದಿನ ಸಮಾಜದ ಮೇಲಿದೆ. ಕನ್ನಡ ನಾಡಿನ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಬಣಜಿಗ ಸಮಾಜದ ಅನೇಕ ಮಹನೀಯರು ಅಮೂಲ್ಯ ಕೊಡುಗೆ ನೀಡಿದ್ದಾರೆ. 12ನೇ ಶತಮಾನದ ಶರಣ ಚಳವಳಿಯಿಂದ ಇಂದಿನವರೆಗೂ ಸಮಾಜದ ಹಲವು ಸಾಧಕರು ತಮ್ಮ ಸೇವೆ ಮತ್ತು ಸಾಧನೆಯ ಮೂಲಕ ದಾರಿದೀಪವಾಗಿದ್ದಾರೆ ಎಂದರು.

ಅಕ್ಕಮಹಾದೇವಿಯವರ ವಚನಗಳು ಹಾಗೂ ಜೀವನಾದರ್ಶಗಳು ಇಡೀ ಮನುಕುಲಕ್ಕೆ ಸ್ಫೂರ್ತಿಯಾಗಿವೆ. ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡಿದರೆ ಸಾಲದು, ಸಂಸ್ಕಾರ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಮೌಲ್ಯಗಳನ್ನು ಕಲಿಸುವುದು ಅಗತ್ಯ. ಮೊಬೈಲ್ ಹಾಗೂ ದೂರದರ್ಶನದ ವ್ಯಾಮೋಹದಿಂದ ಮಕ್ಕಳಿಗೆ ಪೋಷಕರು ಸಮಯ ನೀಡದಿರುವ ಪರಿಸ್ಥಿತಿ ಬದಲಾಗಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರು, ಹಿರಿಯರು ಹಾಗೂ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು.

ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಪರಸ್ಪರ ಕಾಲೆಳೆಯುವ ಮನೋಭಾವವನ್ನು ಬಿಟ್ಟು, ಒಬ್ಬರ ಬೆಳವಣಿಗೆಯನ್ನು ಮತ್ತೊಬ್ಬರು ಪ್ರೋತ್ಸಾಹಿಸುವ ಉದಾರ ಮನೋಭಾವ ಬೆಳೆಸಿಕೊಳ್ಳಬೇಕು. ತಂತಿ ಬಿಗಿಯಾಗಿದ್ದಾಗಲೇ ನಾದ ಮೂಡುವಂತೆ, ಸಮಾಜದ ಶಕ್ತಿ ಹೊರಹೊಮ್ಮಲು ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಗಜೇಂದ್ರಗಡ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮೇಶ ಮೆಣಸಗಿ, ಸಮಾಜವನ್ನು ಕಟ್ಟುವುದಷ್ಟೇ ಅಲ್ಲ, ಅದನ್ನು ಸಂಘಟಿಸಿ ಮುನ್ನಡೆಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.

ಸಮಾಜದ ಸಂಘಟನೆಗಳಲ್ಲಿ ರಾಜಕೀಯವನ್ನು ಬೆರೆಸಬಾರದು. ವೈಯಕ್ತಿಕ ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಸಾಗಬೇಕು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಸಮಾಜದ ವತಿಯಿಂದ ವಿದ್ಯಾನಿಧಿ ಸ್ಥಾಪಿಸಿ, ಸದಸ್ಯರಿಂದ ಸಂಗ್ರಹಿಸುವ ಹಣವನ್ನು ಅಗತ್ಯವಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ. ಜಕ್ಕಲಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸಿದರೆ ತಮ್ಮಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು, ವಿವಿಧ ತಜ್ಞ ವೈದ್ಯರನ್ನು ಕರೆಸುವುದು ಹಾಗೂ ಅಗತ್ಯ ಔಷಧಗಳ ವ್ಯವಸ್ಥೆಗೂ ನೆರವಾಗುವುದಾಗಿ ಭರವಸೆ ನೀಡಿದರು.

ರೋಣ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುತ್ತಣ್ಣ ಸಂಗಳದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಯಾಗಿ ಮಾತನಾಡಿದ ಚನ್ನಮಲ್ಲಪ್ಪ ಗದುಗಿನ, ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವ ಪಡೆದು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಮನವಿ ಮಾಡಿದರು.

ನೂತನ ಪದಾಧಿಕಾರಿಗಳಿಗೆ ನರೇಗಲ್ಲ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ, ಅಟ್ಯಾಪಟ್ಯಾ ಕ್ರೀಡಾಪಟು ಪ್ರೀತಿ ಬುಳ್ಳಾ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಅನ್ನದಾನೇಶ ಮೆಣಸಗಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಟಿ.ಎ. ಕಡಗದ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ವಾಲಿ ಪ್ರಾರ್ಥಿಸಿದರು. ಮುತ್ತಣ್ಣ ಕಡಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ವಾಲಿ ಸ್ವಾಗತಿಸಿದರು. ಪ್ರಕಾಶಪ್ಪ ಹೊಸಮನಿ ನಿರೂಪಿಸಿದರು.

ವೇದಿಕೆಯಲ್ಲಿ ಜಿ.ಎ. ಬೆಲ್ಲದ, ಅಶೋಕಪ್ಪ ಯಾವಗಲ್ಲ, ಡಾ. ಎ.ವಿ. ನರೇಗಲ್ಲ, ನೂತನ ಅಧ್ಯಕ್ಷ ಚನ್ನಬಸಪ್ಪ ಸೂಡಿ, ವೀರಪ್ಪ ಪಟ್ಟಣಶೆಟ್ಟಿ, ಅನಿಲಕುಮಾರ ಹೊಸಮನಿ, ವೀರಪ್ಪ ಅಕ್ಕಿಶೆಟ್ಟರ, ಶರಣಬಸಪ್ಪ ಪಟ್ಟಣಶೆಟ್ಟಿ, ಮಹಾದೇವಪ್ಪ ಮೆಣಸಗಿ, ಸುಭಾಷಚಂದ್ರ ಕುದರಿ, ವೀರಪ್ಪ ವಾಲಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಹುದ್ದೆಗಳನ್ನು ಅಧಿಕಾರವೆಂದು ಭಾವಿಸದೆ, ಸಮಾಜ ಸೇವೆಗೆ ದೊರೆತ ಅವಕಾಶವೆಂದು ಪರಿಗಣಿಸಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು.

— ಕೆ.ಎ. ಬಳಿಗೇರ, ಅಧ್ಯಕ್ಷರು, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img