HomeHassanಕುಂಚದ ಮೂಲಕ ಕ್ರಾಂತಿ ಬರೆದ ಕಲಾ ದಿಗ್ಗಜ ಕೆ.ಟಿ. ಶಿವಪ್ರಸಾದ್ ನಿಧನ: ರೈತರ ಧ್ವನಿಯಾಗಿದ್ದ ಚಿತ್ರಕಲಾವಿದ...

ಕುಂಚದ ಮೂಲಕ ಕ್ರಾಂತಿ ಬರೆದ ಕಲಾ ದಿಗ್ಗಜ ಕೆ.ಟಿ. ಶಿವಪ್ರಸಾದ್ ನಿಧನ: ರೈತರ ಧ್ವನಿಯಾಗಿದ್ದ ಚಿತ್ರಕಲಾವಿದ ಇನ್ನು ನೆನಪು ಮಾತ್ರ

For Dai;y Updates Join Our whatsapp Group

ಹಾಸನ: ಕರ್ನಾಟಕದ ಹೆಮ್ಮೆಯ ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಗ್ರಾಮೀಣ ಬದುಕು, ರೈತರ ಸಂಕಷ್ಟ, ತಳಸಮುದಾಯಗಳ ಹೋರಾಟ ಹಾಗೂ ಸಾಮಾಜಿಕ ಅಸಮಾನತೆಯನ್ನು ತಮ್ಮ ಕಲೆಯ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿಸಿದ್ದ ಈ ಮಹಾನ್ ಕಲಾವಿದರ ಅಗಲಿಕೆ ಭಾರತೀಯ ಚಿತ್ರಕಲಾ ಕ್ಷೇತ್ರಕ್ಕೆ ಭಾರೀ ಆಘಾತ ತಂದಿದೆ.

ಕೊಡಗಿನ ಮಡಿಕೇರಿ ತಾಲೂಕಿನ ಕೃಷಿಕ ಕುಟುಂಬದಲ್ಲಿ 1947ರಲ್ಲಿ ಜನಿಸಿದ್ದ ಶಿವಪ್ರಸಾದ್, ಬಾಲ್ಯದಲ್ಲೇ ಚಿತ್ರಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕುಟುಂಬದ ಆಶಯದಂತೆ ಇಂಜಿನಿಯರಿಂಗ್ ಶಿಕ್ಷಣ ಆರಂಭಿಸಿದರೂ, ಕಲೆಯ ಕರೆಗೆ ಸ್ಪಂದಿಸಿ ವ್ಯಾಸಂಗವನ್ನು ಅರ್ಧದಲ್ಲೇ ತೊರೆದು ಮುಂಬೈನ ಪ್ರತಿಷ್ಠಿತ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ನಲ್ಲಿ ಶಿಕ್ಷಣ ಪಡೆದು 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದರು. ಅಲ್ಲಿಂದ ಆರಂಭವಾದ ಅವರ ಕಲಾ ಪಯಣ ಅಂತಾರಾಷ್ಟ್ರೀಯ ಮಟ್ಟದ ಗುರುತಿನವರೆಗೆ ಸಾಗಿತು.

ಸಾಮಾಜಿಕ ಬದ್ಧತೆಯೇ ಅವರ ಕಲೆಯ ಜೀವಾಳವಾಗಿತ್ತು. ರೈತರು, ಕಾರ್ಮಿಕರು, ದಲಿತರು ಹಾಗೂ ಶೋಷಿತರ ಬದುಕನ್ನು ತಮ್ಮ ಚಿತ್ರಗಳಲ್ಲಿ ಜೀವಂತಗೊಳಿಸಿದ ಅವರು, ಕಲೆಯನ್ನು ಸಮಾಜ ಪರಿವರ್ತನೆಯ ಸಾಧನವನ್ನಾಗಿ ಬಳಸಿದರು. ದಲಿತ, ರೈತ ಹಾಗೂ ಸೋಷಿಯಲಿಸ್ಟ್ ಚಳವಳಿಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರು, ಕುಂಚದ ಮೂಲಕವೇ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಅವರ ಕಲಾಕೃತಿಗಳು ಬ್ರಿಟನ್‌ನ ಖ್ಯಾತ ಕಲಾವಿದ ಲುಸಿಯನ್ ಫ್ರಾಯ್ಡ್ ಅವರ ಶೈಲಿಗೆ ಹೋಲಿಕೆ ಪಡೆಯುವಷ್ಟು ಪ್ರಭಾವ ಬೀರಿದ್ದವು. ಬೆಂಗಳೂರು, ಮೈಸೂರು, ಮುಂಬೈ, ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ಆಯೋಜಿಸಿದ್ದ ಅವರು, ಜಹಾಂಗೀರ್ ಆರ್ಟ್ ಗ್ಯಾಲರಿ, ಸಾಕ್ಷಿ ಗ್ಯಾಲರಿ, ಆರ್ಟ್ ಟುಡೇ ಸೇರಿದಂತೆ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದರು. ಭೋಪಾಲ್ ಬಿನ್ನಾಲೆ, ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ ಹಾಗೂ ಹಾಂಗ್‌ಕಾಂಗ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲೂ ಭಾಗವಹಿಸಿ ಜಾಗತಿಕ ಮನ್ನಣೆ ಗಳಿಸಿದ್ದರು.

ಚಿತ್ರಕಲೆಯ ಜೊತೆಗೆ ಛಾಯಾಗ್ರಾಹಕ ಹಾಗೂ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿದ್ದ ಶಿವಪ್ರಸಾದ್ ಅವರ ಸೇವೆಯನ್ನು ಗೌರವಿಸಿ ಕರ್ನಾಟಕ ಸರ್ಕಾರ 2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಸಾಮಾಜಿಕ ಕಳಕಳಿ, ಕಲಾತ್ಮಕ ವೈಶಿಷ್ಟ್ಯ ಹಾಗೂ ಜಾಗತಿಕ ಮನ್ನಣೆಯ ಮೂಲಕ ಕನ್ನಡ ನಾಡಿನ ಹೆಸರನ್ನು ವಿಶ್ವದಾದ್ಯಂತ ಪಸರಿಸಿದ್ದ ಈ ಮಹಾನ್ ಕಲಾವಿದರ ಅಗಲಿಕೆ ಕಲಾ ಲೋಕಕ್ಕೆ ಎಂದಿಗೂ ತುಂಬಲಾರದ ನಷ್ಟವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img